ಮಾಗಡಿ: ‘ಕೋವಿಡ್–19 ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರಿಗೂ ಆರೋಗ್ಯ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಕವಿತಾ ತಿಳಿಸಿದರು.
ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ಜ್ಞಾನವಿಕಾಸ ಕೇಂದ್ರದ ಸಹಯೋಗದಲ್ಲಿ ಅಡಕಮಾರನಹಳ್ಳಿಯಲ್ಲಿ ಬುಧವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣ ಮತ್ತು ಪೌಷ್ಟಿಕ ಆಹಾರದ ಕುರಿತು ಅವರು ಮಾತನಾಡಿದರು.
‘ಹಿರಿಯರು ಹೊರಗಿನಿಂದ ಮನೆ ಆವರಣಕ್ಕೆ ಬಂದ ಕೂಡಲೆ, ಕೈ ಕಾಲು ತೊಳೆದುಕೊಂಡು ಪ್ರವೇಶಿಸುತ್ತಿದ್ದರು. ಪೂರ್ವಿಕರು ಅನುಸರಿಸಿಕೊಂಡು ಬಂದಿದ್ದ ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸಬೇಕಿದೆ. ದೇಶೀಯ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಿದೆ’ ಎಂದರು.
‘ಸೋಂಕು ನಿವಾರಕಗಳನ್ನು ಬಳಸುವ ಅಗತ್ಯವಿದೆ. ಕೆಮ್ಮುವಾಗ, ಸೀನುವಾಗ ಬಾಯಿಗೆ ವಸ್ತ್ರ ಅಡ್ಡ ಹಿಡಿದುಕೊಳ್ಳಬೇಕಿದೆ. ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯವಾಗಿದೆ.ಕೋವಿಡ್–19 ಬಗ್ಗೆ ಭಯಬೇಡ. ಆದರೆ, ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.
ಆರೋಗ್ಯ ಸಹಾಯಕ ರಾಜಣ್ಣ, ಸೇವಾ ಪ್ರತಿನಿಧಿಗಳಾದ ಉಷಾ, ಪ್ರೇಮಾ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.