ಬಿಡದಿ: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಪಟ್ಟಣದ ವ್ಯಕ್ತಿಯೊಬ್ಬರು ಕೋವಿಡ್ಗೆ ಬಲಿಯಾಗಿದ್ದಾರೆ. ಬಿಡದಿ- ಕೇತಗಾನಹಳ್ಳಿ ರಸ್ತೆ ಬದಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಅವರು, ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಅವರಿಗೆ45 ವರ್ಷ ವಯಸ್ಸಾಗಿತ್ತು. ಶನಿವಾರ ಎದೆನೋವು ಕಾಣಿಸಿಕೊಂಡ ನಂತರ ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಹೋಗಿದ್ದರು. ಆನಂತರ ಬೆಂಗಳೂರಿನ ಬಿಜಿಎಸ್ ಹಾಗೂ ರಾಜರಾಜೇಶ್ವರಿ ಆಸ್ಪತ್ರೆಗೆ ತೆರಳಿದಾಗ ಅಲ್ಲಿ ದಾಖಲು ಮಾಡಿಕೊಳ್ಳಲಿಲ್ಲ. ನಂತರ ಕಿಮ್ಸ್ ಆಸ್ಪತ್ರೆಗೂ ಭೇಟಿ ನೀಡಿದ್ದರು. ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಬೌರಿಂಗ್ ಆಸ್ಪತ್ರೆಗೆ ದಾಖಲಾಗುವಂತೆ ಸೂಚನೆ ನೀಡಿದ್ದರು.
ಬೌರಿಂಗ್ನಲ್ಲಿಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಪರೀಕ್ಷಾ ವರದಿ ಬರುವ ಮುಂಚೆಯೇ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಭಾನುವಾರ ಮಧ್ಯಾಹ್ನ ಮೃತಪಟ್ಟರು. ಸಂಜೆ ವೇಳೆಗೆ ವರದಿಯು ಪಾಸಿಟಿವ್ ಆಗಿತ್ತು. ಆನಂತರ ವೈದ್ಯರು ಮೃತದೇಹವನ್ನು ವಾರಸುದಾರರಿಗೆ ನೀಡಲು ನಿರಾಕರಿಸಿದ್ದರು.
ಕುಟುಂಬದವರ ಸಮ್ಮತಿ: ಮೃತರ ಅಂತ್ಯಸಂಸ್ಕಾರವನ್ನು ಬಿಡದಿಯಲ್ಲಿ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದರು. ಕೋವಿಡ್ನಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕುಟುಂಬದವರ ಮನವೊಲಿಸಿದರು. ಬೆಂಗಳೂರಿನ– ಮೈಸೂರು ಸರ್ಕಲ್ನ ಈದ್ಗಾ ಮೈದಾನದಲ್ಲಿಯೇ ವೈಜ್ಞಾನಿಕ ಕ್ರಮ ಅನುಸರಿಸಿಅಂತ್ಯ ಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿದೆ.
ವ್ಯಕ್ತಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಕಿರಿಯ ಪುತ್ರನಿಗೆ ಜ್ವರ ಕಾಣಿಸಿಕೊಂಡಿದ್ದು, ಪತ್ನಿ ಮತ್ತು ಹಿರಿಯ ಮಗ ಆರೋಗ್ಯವಾಗಿದ್ದಾರೆ. ಮೃತ ವ್ಯಕ್ತಿಯ ಮನೆಯ ಸುತ್ತಮುತ್ತಲ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಅಲ್ಲದೆ, ಸಂಪರ್ಕದಲ್ಲಿದ್ದವರ ಹುಡುಕಾಟವನ್ನು ಆರೋಗ್ಯ ಇಲಾಖೆ ನಡೆಸಿದೆ.