ಚನ್ನಪಟ್ಟಣ: ‘ಆರೋಗ್ಯ ಶಿಕ್ಷಣವನ್ನು ಪಠ್ಯೇತರ ಚಟುವಟಿಕೆಯಾಗಿ ನಿಗದಿಪಡಿಸುವ ಅವಶ್ಯಕತೆಯಿದೆ’ ಎಂದು ಮುಖ್ಯ ಶಿಕ್ಷಕ ಬಸವರಾಜಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ಕುವೆಂಪು ಪರಿಸರ ಸಂಘದ ವತಿಯಿಂದ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ‘ಬಯಲು ಶೌಚ, ಪ್ಲಾಸ್ಟಿಕ್ ಮುಕ್ತ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ’ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಬಲ್ಲವು’ ಎಂದರು.
ಉಪನ್ಯಾಸ ನೀಡಿದ ಆರೋಗ್ಯ ಇಲಾಖೆಯ ಡಿ.ಪುಟ್ಟಸ್ವಾಮಿಗೌಡ ಮಾತನಾಡಿ, ‘ಬಯಲು ಮಲ ವಿಸರ್ಜನೆ ಅಪಾಯಕಾರಿ. ಇದರಿಂದ ಜಂತುಹುಳು ಸಮಸ್ಯೆ, ರಕ್ತ ಹೀನತೆ, ಚರ್ಮದ ಸಮಸ್ಯೆಯ ಜತೆಗೆ ಮಹಿಳೆಯರ ಮೇಲಾಗುವ ಅತ್ಯಾಚಾರ, ದೌರ್ಜನ್ಯ, ಹಾವು, ಕರಡಿಗಳಂತಹ ಪ್ರಾಣಿಗಳ ದಾಳಿಗಳಾಗುವ ಸಂಭವ ಹೆಚ್ಚು’ ಎಂದರು.
‘ಶೌಚಾಲಯ ನಿರ್ಮಾಣ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಘನತೆ, ಗೌರವ, ಆರೋಗ್ಯದ ಪ್ರಶ್ನೆಯಾಗಿದೆ. ಪ್ರತಿ ಕುಟುಂಬ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಶೌಚಾಲಯ ನಿರ್ಮಾಣ ಮಾಡಿಕೊಳ್ಳುವುದರ ಜತೆಗೆ ಅವುಗಳನ್ನು ತಪ್ಪದೇ ಬಳಸುವುದರ ಮೂಲಕ ಸ್ವಚ್ಛ ಭಾರತ್ ಪರಿಕಲ್ಪನೆಗೆ ಪೂರಕವಾಗಿ ಸಹಕರಿಸಿ ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಮುಂದಾಗಬೇಕು’ ಎಂದರು.
ಎಸ್.ಡಿ.ಎಂ.ಸಿ ಅಧಕ್ಷ ಬಸವರಾಜ ಅರಸ್ ಮಾತನಾಡಿ, ‘ಅತಿಯಾದ ಪ್ಲಾಸ್ಟಿಕ್ ಬಳಕೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು. ಅಂಗಡಿಗಳಿಂದ ಮನೆಗೆ ತರಕಾರಿ, ದಿನಸಿ ಪದಾರ್ಥಗಳನ್ನು ತರಲು ಬಟ್ಟೆ ಬ್ಯಾಗ್ಗಳನ್ನು ಬಳಸುವ ಮೂಲಕ ಭೂ ಮಾಲಿನ್ಯ, ಜಲಮಾಲಿನ್ಯ, ವಾಯುಮಾಲಿನ್ಯಕ್ಕೆ ಕಾರಣವಾಗುವ ಪ್ಲಾಸ್ಟಿಕ್ ಕವರ್ಗಳನ್ನು ತಿರಸ್ಕರಿಸಬೇಕು’ ಎಂದರು.
ಕುವೆಂಪು ಪರಿಸರ ಸಂಘದ ಸಂಯೋಜಕ ಬಸವರಾಜು, ಶಿಕ್ಷಕರಾದ ರಾಜೇಶ್, ರವಿ, ಸುದರ್ಶನ್, ಶಿವಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಖಜಾಂಚಿ ಚಿಕ್ಕಚನ್ನೇಗೌಡ ಇದ್ದರು.