ಕನಕಪುರ: ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಮುಳ್ಳಳ್ಳಿ ಗ್ರಾಮದಲ್ಲಿರುವ ಬಸವೇಶ್ವರ, ಮಾರಮ್ಮ ದೇವಿಯ ಜಾತ್ರೆ ಮತ್ತು ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆದು ಸಂಪನ್ನವಾಯಿತು.
ಮೇ 20ರಿಂದ ಆರಂಭಗೊಂಡಿದ್ದ ಜಾತ್ರೆ ಗುರುವಾರ ಮುಕ್ತಾಯವಾಯಿತು.
ಸೋಮವಾರ ರಾತ್ರಿ ಬಸವೇಶ್ವರ ಸ್ವಾಮಿಯ ಓಲೆ ಬಂಡಿ ನಡೆಯಿತು. ಮಂಗಳವಾರ ಬಸವೇಶ್ವರ ಸ್ವಾಮಿ ಅಗ್ನಿಕೊಂಡೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮ ಜರುಗಿತು. ಐ.ಗೊಲ್ಲಹಳ್ಳಿ ಶಂಭುಲಿಂಗ ಸ್ವಾಮೀಜಿ ತೇರಿಗೆ ಚಾಲನೆ ನೀಡಿದರು.
ಬುಧವಾರ ಬೆಳಿಗ್ಗೆ ಮಾರಮ್ಮ ದೇವಿಯ ಅಗ್ನಿ ಕೊಂಡೋತ್ಸವ ನೆರವೇರಿತು. ಮಧ್ಯಾಹ್ನ 2 ಗಂಟೆಗೆ ಸಿಡಿ ನಡೆಯಿತು. ಸಂಜೆ ಪಲ್ಲಕ್ಕಿ ಉತ್ಸವ ನೆರವೇರಿತು. ಮಾರಮ್ಮ ಬಸಪ್ಪ ಮತ್ತು ಪಟ್ಟಾಲದಮ್ಮ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಬಸವೇಶ್ವರ ದೇವಸ್ಥಾನದ ಅರ್ಚಕ ಶಿವಲಿಂಗ, ಮಾರಮ್ಮ ದೇವಾಲಯದ ಅರ್ಚಕರಾದ ಅನಿಲ್ ಕುಮಾರ್ ಮತ್ತು ರವಿಕುಮಾರ್ ಅಗ್ನಿಕೊಂಡೋತ್ಸವ ನಡೆಸಿಕೊಟ್ಟರು.
ಮಂಗಳವಾರ ಮತ್ತು ಬುಧವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ಗ್ರಾಮದಲ್ಲಿ ನೆಲೆಸಿರುವಂತಹ 16 ಜಾತಿಯ ಜನಾಂಗದವರು ತಂಬಿಟ್ಟಿನ ಆರತಿ ಮಾಡಿ ದೇವರಿಗೆ ತಂಪು ಸಲ್ಲಿಸಿದರು.
ಮುಳ್ಳಳ್ಳಿಯಲಲ್ಲಿ ನಡೆದ ಮಾರಮ್ಮನ ಅಗ್ನಿಕೊಂಡೋತ್ಸವದಲ್ಲಿ ಮಾರಮ್ಮನ ಅರ್ಚಕ ರವಿಕುಮಾರ್ ಕೊಂಡ ಹಾಯ್ದರು