ಬೆಂಗಳೂರಿನಲ್ಲಿ ವಾಸವಿದ್ದರೂ ಸಿದ್ದಲಿಂಗಯ್ಯ ಹುಟ್ಟಿದ ಊರಿನ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಆಗಾಗ್ಗೆ ಬಂದು ಇಲ್ಲಿ ಸಂತಸದಿಂದ ಕಾಲ ಕಳೆದು ಹೋಗುತ್ತಿದ್ದರು. ಸಾವನದುರ್ಗ, ಮಂಚನಬೆಲೆ, ಸಿದ್ದೇದೇವರ ಬೆಟ್ಟ, ಕಲ್ಯಾ ಬೆಟ್ಟದಲ್ಲಿನ ಬಹುಭಾಷಾ ವಿಶಾರದ ಪಾಲ್ಕುರಿಕೆ ಸೋಮನಾಥನ ಸಮಾಧಿ ಮತ್ತು ಅಕ್ಬರೀಯ ಕಾಳಿದಾಸ ಸಂಗೀತಕಲಾನಿಧಿ ಪಂಡರೀಕ ವಿಠ್ಠಲನ ಜನ್ಮಸ್ಥಳ ಸಾತನೂರು ಅವರ ನೆಚ್ಚಿನ ಸ್ಥಳಗಳು. ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ಪಣಕನಕಲ್ಲು ಗ್ರಾಮದ ಸಮೀಪ ಇರುವ ಪಿತ್ರಾರ್ಜಿತ ಭೂಮಿಯಲ್ಲಿ ಸಹೋದರ ಕೃಷಿ ಅಧಿಕಾರಿ ಶಿವಶಂಕರ್ ಸಹಯೋಗದಲ್ಲಿ ವ್ಯವಸಾಯ ಮಾಡುತ್ತಿದ್ದರು.