ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದಾಹವೇ ಎಲ್ಲಾ ಸಾಧನೆಗೆ ಮೂಲ

ರಾಮನಗರಕ್ಕೆ ಶೀಘ್ರವೇ ಆರೋಗ್ಯ ವಿವಿ ಸ್ಥಳಾಂತರ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭರವಸೆ
Last Updated 7 ನವೆಂಬರ್ 2021, 5:20 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಆಧುನಿಕ ಜಗತ್ತಿನಲ್ಲಿ ಜ್ಞಾನದಾಹವೇ ಎಲ್ಲರ ಸಾಧನೆಗಳಿಗೆ ಮೂಲವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ನಗರದ ಶತಮಾನೋತ್ಸವ ಭವನದಲ್ಲಿ ಶನಿವಾರ ನಡೆದ ಎಂ.ಎಲ್. ಮಾದಯ್ಯ ಅವರ ಆತ್ಮಕಥೆ ‘ಜೀವನಸೌಧ: ಹಳ್ಳಿ ಹೈದನ ತಾಂತ್ರಿಕಗಾಥೆ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಾಧನೆ ಮಾಡುವ ಛಲವೇ ಇಲ್ಲದವರಿಗೆ ಬರೀ ಕೊರತೆಗಳು ಕಾಣಿಸುತ್ತವೆ. ಸಾಧಿಸುವ ನಿಷ್ಠೆ ಇದ್ದರೆ ಗುರಿ ಮಾತ್ರ ಕಣ್ಣೆದುರು ಇರುತ್ತದೆ ಎನ್ನುವುದಕ್ಕೆ ಮಾದಯ್ಯ ಅವರ ಬದುಕು ಉದಾಹರಣೆಯಾಗಿದೆ ಎಂದರು.

ಕುಗ್ರಾಮದಲ್ಲಿ ಹುಟ್ಟಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಎಂ.ಎಲ್. ಮಾದಯ್ಯ ಅವರ ಜೀವನವು ಇಡೀ ರಾಜ್ಯದ ಜನರಿಗೆ ಪ್ರೇರಣಾದಾಯಿಯಾಗಿದೆ. ನಿಸ್ವಾರ್ಥವಾಗಿ ಬದುಕುತ್ತಿರುವ ಅವರ ಆದರ್ಶ ಮತ್ತು ಸಾಧನೆಗಳು ಯುವ ತಲೆಮಾರಿಗೆ ಸ್ಫೂರ್ತಿದಾಯಕವಾಗಿವೆ. ಇಂತಹ ವ್ಯಕ್ತಿಯನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ಬಣ್ಣಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್ ಹುದ್ದೆ ಅಲಂಕರಿಸಿದ್ದ ಲೇಖಕರದು ಪರಿಪೂರ್ಣ ಬದುಕಾಗಿದೆ. ಅವರು ಕೊಟ್ಟಿರುವ ಕೊಡುಗೆಗಳು ಮತ್ತು ಬದುಕು ಸುಭದ್ರವಾದ ಸಮಾಜ ಕಟ್ಟಲು ಸೂತ್ರಪ್ರಾಯವಾಗಿವೆ ಎಂದು ಸಚಿವರು ನುಡಿದರು.

ಆರೋಗ್ಯ ವಿವಿ ಸ್ಥಳಾಂತರ: ಸದ್ಯಕ್ಕೆ ಬೆಂಗಳೂರಿನಿಂದ ಕಾರ್ಯ ನಿರ್ವಹಿಸುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯನ್ನು ಶೀಘ್ರವೇ ರಾಮನಗರಕ್ಕೆ ಸ್ಥಳಾಂತರಿಸಲಾಗುವುದು. ವಿ.ವಿಗೆ ನೂತನ ಕುಲಪತಿಯನ್ನು ನೇಮಕಗೊಂಡ ಕೂಡಲೇ ಇತ್ತ ಗಮನ ಹರಿಸಲಾಗುವುದು ಎಂದು ಅಶ್ವತ್ಥನಾರಾಯಣ ಭರವಸೆ ನೀಡಿದರು.

ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ರಾಮನಗರ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ, ಲೇಖಕ ಎಂ.ಎಲ್. ಮಾದಯ್ಯ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಶ್, ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಮುಖ್ಯಸ್ಥ ವೂಡೇ ಪಿ. ಕೃಷ್ಣ, ಲೇಖಕರಾದ ಡಾ.ಬೈರಮಂಗಲ ರಾಮೇಗೌಡ, ಡಾ.ಪುತ್ತೂರಾಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT