ಕನಕಪುರ: ಇಲ್ಲಿನ ಶ್ರೀನಿವಾಸನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ರೇಷ್ಮೆ ಸೊಪ್ಪು ತರಲು ತೋಟಕ್ಕೆ ತೆರಳಿದ್ದ ರೈತರೊಬ್ಬರ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ಗಾಯಗೊಳಿಸಿದೆ.
ತಾಲ್ಲೂಕಿನ ಟಿ.ಬೇಕುಪ್ಪೆ ಗ್ರಾಮದ ಶಿವಲಿಂಗಯ್ಯ ಅವರು ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ತೋಟಕ್ಕೆ ಹೋಗುತ್ತಿದ್ದ ಶಿವಲಿಂಗಯ್ಯ ಅವರ ಮೇಲೆ ಏಕಾಏಕಿ ದಾಳಿ ಮಾಡಿದ ಕಾಡಾನೆ ಅವರನ್ನು ಸೊಂಡಿಲಿನಿಂದ ಎತ್ತಿ ತೋಟದಲ್ಲಿಯೇ ಬಿಸಾಡಿ ಹೊರಟು ಹೋಗಿದೆ.
ದಾಳಿಯಿಂದಾಗಿ ಶಿವಲಿಂಗಯ್ಯ ಅವರ ಎಡ ತೋಳು, ಬಲ ಕಾಲಿಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು ಅವರು ಜೋರಾಗಿ ಕಿರುಚಿಕೊಂಡಾಗ ಅಕ್ಕಪಕ್ಕದ ತೋಟದಲ್ಲಿದ್ದ ಸಹಾಯಕ್ಕೆ ಹೋಗಿದ್ದಾರೆ.
ಗಾಯಗೊಂಡ ರೈತನನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕೋಡಿಹಳ್ಳಿ ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿ ಅಂಥೋಣಿ ರೇಗೊ ಹಾಗೂ ಸಿಬ್ಬಂದಿ ಅಲ್ಲಿಂದ ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ಸಂಜಯ್ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶಿವಲಿಂಗಯ್ಯ ಪ್ರಾಣಾಪಾಯದಿಂದ ಅವರ ಚಿಕಿತ್ಸೆ ವೆಚ್ಚವನ್ನು ಅರಣ್ಯ ಇಲಾಖೆಯಿಂದ ಭರಿಸುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.