ಕನಕಪುರ: ಕೋವಿಡ್ ಸೋಂಕು ತಡೆಗಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದಿದ್ದ ಜನತೆ ವ್ಯಾಕ್ಸಿನ್ ಸಿಗದೆ ಪರದಾಡಿದ್ದು ಭಾನುವಾರ ನಗರದಲ್ಲಿ ನಡೆಯಿತು.
ಇಲ್ಲಿನ ಗೂಡಿನ ಮಾರುಕಟ್ಟೆ ಪಕ್ಕದಲ್ಲಿರುವ ನಗರ ಆಸ್ಪತ್ರೆ ಮತ್ತು ಮೇಗಳ ಬೀದಿಯಲ್ಲಿರುವ ಐಪಿಪಿ ಆಸ್ಪತ್ರೆಗೆ ನೂರಾರು ಮಂದಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬೆಳಿಗ್ಗೆಯೇ ಬಂದಿದ್ದು ಆಸ್ಪತ್ರೆ ಸಿಬ್ಬಂದಿ ಲಸಿಕೆ ಲಭ್ಯವಿಲ್ಲವೆಂದು ಹೇಳಿದ್ದು ಬೇಸರ ತರಿಸಿತು.
ಇಷ್ಟು ದಿನ ಸರ್ಕಾರದ ವತಿಯಿಂದ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರಚಾರ ನಡೆಸಿ ಒತ್ತಾಯ ಮಾಡಲಾಗುತ್ತಿದ್ದು, ಆರೋಗ್ಯ ಸಿಬ್ಬಂದಿ ಮೂಲಕ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡಲಾಗುತಿತ್ತು.
ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಸೋಂಕು ತಗಲುವುದು ತೀರ ಕಡಿಮೆ ಎಂಬ ತಜ್ಞರ ಮಾಹಿತಿಯಿಂದ ಎಚ್ಚೆತ್ತ ಜನರು ಸ್ವಯಂ ಪ್ರೇರಣೆಯಿಂದ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಸದ್ಯಕ್ಕೆ ಲಸಿಕೆ ಸಿಗುತ್ತಿಲ್ಲವೆಂಬುದು ಜನರಲ್ಲಿ ಗೊಂದಲ ಸೃಷ್ಟಿಸಿದೆ.
ಆರೋಗ್ಯ ಇಲಾಖೆಯ ಲಸಿಕಾ ಉಗ್ರಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ರೋಹಿತ್ ಮಾತನಾಡಿ, ಸದ್ಯಕ್ಕೆ ರಾಮನಗರ ಜಿಲ್ಲಾ ಕೇಂದ್ರದಿಂದ ಸ್ಟಾಕ್ ಬಂದಿಲ್ಲ ಎಂದು ತಿಳಿಸಿದರು.