ಮಾಗಡಿ: ‘ರಾಜಧಾನಿಗೆ ಸಮೀಪವಿರುವ ಮಾಗಡಿ ಅಭಿವೃದ್ಧಿ ಕಾಣದೆ ದೀಪದ ಕೆಳಗಿನ ಕತ್ತಲಿನಂತಿದೆ’ ಎಂದು ಯುವ ಭಾರತ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್.ಕೆ. ಸಾಮ್ರಾಟ್ ಗೌಡ ತಿಳಿಸಿದರು.
ಹೊನ್ನಾಪುರದ ರಾಮು ತೋಟದ ಮನೆಯಲ್ಲಿ ಸೋಮವಾರ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರಿಗೆ ಆರೋಗ್ಯ ಮತ್ತು ಅಪಘಾತ ವಿಮಾ ಪಾಲಿಸಿ ವಿತರಿಸಿ ಅವರು ಮಾತನಾಡಿದರು.
ಯುವಜನರು ಸಂಘಟಿತರಾಗಿ ಕೃಷಿ ಆಧಾರಿತ ವಾಣಿಜ್ಯ ಉದ್ಯಮ ಆರಂಭಿಸುವಂತೆ ಶಾಂತಿಯುತ ಹೋರಾಟ ನಡೆಸಬೇಕಿದೆ. ಕೈಗಾರಿಕೆಗಳನ್ನು ಆರಂಭಿಸಿದರೆ 2 ಸಾವಿರ ರೈತ ಕುಟುಂಬಗಳಿಗೆ ಆಧಾರವಾಗಿರುವ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ರೈತರು ಬೆಳೆಯುವ ಹೂವು, ಹಣ್ಣು, ತರಕಾರಿ ಮಾರಾಟ ಮಾಡಲು ಮೊದಲು ಸೂಕ್ತ ಮಾರುಕಟ್ಟೆಯ ಆರಂಭಿಸಬೇಕಿದೆ ಎಂದು ಹೇಳಿದರು.
ರಾಜಕಾರಣಿಗಳು ಜನರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು ಬಿಹಾರದಂತೆ ರಾಜಕೀಯ ಮಾಡಲು ಹೊರಟಿದ್ದಾರೆ. ತಾಲ್ಲೂಕಿನಲ್ಲಿ 15 ಸಾವಿರ ಮಂದಿ ನಿರುದ್ಯೋಗಿಗಳಿದ್ದಾರೆ. ಹಳ್ಳಿಗಳು ಅಭಿವೃದ್ಧಿಯಾಗದ ಹೊರತು ದಿಲ್ಲಿ ಪ್ರಗತಿ ಕಾಣುವುದಿಲ್ಲ. ತಾಲ್ಲೂಕಿನ ಅಭಿವೃದ್ಧಿಗೆ ನಮ್ಮ ಸಂಸ್ಥೆ ವತಿಯಿಂದ ಶ್ರಮಿಸುತ್ತೇವೆ. ಆ. 3ರಂದು ಪರಿಪೂರ್ಣ ಆರೋಗ್ಯ ವಿಮೆ ಪಾಲಿಸಿ ವಿತರಿಸಲಿದ್ದೇವೆ ಎಂದು ಹೇಳಿದರು.
ಕೊರೊನಾ ಸೋಂಕು ಹರಡದಂತೆ ಪತ್ರಕರ್ತರು ಹಳ್ಳಿ ಹಳ್ಳಿಗೆ ತೆರಳಿ ರೈತರಲ್ಲಿ ಅರಿವು ಮೂಡಿಸಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಬೇಕು. ಹಳ್ಳಿಗಳ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ಬರೆದು ಪರಿಹಾರ ದೊರಕಿಸಲು ಪ್ರಯತ್ನಿಸಬೇಕು. ಕೋವಿಡ್ ಕಂಟಕದ ನಡುವೆ ನಿತ್ಯ ಮನೆಯಿಂದ ಹೊರಗೆ ಹೋಗಿ ಸುತ್ತಿ ಸುದ್ದಿ ಸಂಗ್ರಹಿಸುವ ಕಾರ್ಯನಿರತ ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ₹ 1 ಲಕ್ಷದಿಂದ ₹ 10 ಲಕ್ಷದ ಅಪಘಾತ ವಿಮೆ ಮಾಡಿಸಿದ್ದೇವೆ. 30 ಪತ್ರಕರ್ತರಿಗೆ ವಿಮಾ ಪಾಲಿಸಿ ವಿತರಿಸಿದ್ದೇವೆ ಎಂದು ತಿಳಿಸಿದರು.
ಉದ್ಯಮಿ ಬ್ರಿಜೇಶ್ ರೆಡ್ಡಿ, ಚಕ್ರಬಾವಿ ಜಗದೀಶ್, ವಿಷ್ಣು ಸೇನೆ ಜಿಲ್ಲಾ ಅಧ್ಯಕ್ಷ ಜಗದೀಶ್, ಹೊಸಪೇಟೆ ಫೈಲ್ವಾನ್ ಅಂಜನ್ ಕುಮಾರ್, ವಿಕಾಸ್ ಗೌಡ ಇದ್ದರು.