ರಾಮನಗರ: ಕೆರೆಗೋಡು ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಶುಕ್ರವಾರ ಕರೆ ಕೊಟ್ಟಿದ್ದ ಬಂದ್ ಬೆಂಬಲಿಸಿ, ನಗರದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಹನುಮಾನ್ ಚಾಲೀಸ ಪಠಿಸಿದರು.
ಕಚೇರಿ ಮುಂಭಾಗ ಜಮಾಯಿಸಿ ಹನುಮಧ್ವಜ ಪ್ರದರ್ಶಿಸಿದ ಕಾರ್ಯಕರ್ತರು, ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು. ಕೆರೆಗೋಡು ಗ್ರಾಮದಲ್ಲಿ ಸರ್ಕಾರ ಹನುಮ ಧ್ವಜ ಇಳಿಸುವ ಮೂಲಕ, ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹನುಮ ಧ್ವಜವು ಯುವಜನರ ಶಕ್ತಿ, ಯುಕ್ತಿ ಹಾಗೂ ವೀರತ್ವದ ಸಂಕೇತವಾಗಿದೆ. ಸದ್ಗುಣಗಳಿಗೆ ಪ್ರೇರಣೆ ನೀಡುವ ಧ್ಜವವನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಹಾಗಾಗಿ, ಸರ್ಕಾರ ಹನುಮಧ್ವಜಕ್ಕೆ ಮಾಡಿರುವ ಅವಮಾನ ಖಂಡನೀಯ. ಇನ್ನು ಮುಂದೆ ಎಲ್ಲಿಯೇ ಧ್ವಜ ಹಾರಿಸಿದರೂ ಸರ್ಕಾರ ಅದಕ್ಕೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಕಿರಣ್, ರಮೇಶ್, ಮಧುಸೂಧನ್, ಸಂತು, ಅಭಿ, ಸುಹಾಸ್, ಯೋಗೇಶ್ ಇದ್ದರು.