ಚನ್ನಪಟ್ಟಣ: ಜಾನಪದ ಸಂಸ್ಕೃತಿ ಈ ನೆಲದ ಮೂಲ ನಿವಾಸಿಗಳ ಅಸ್ಮಿತೆಯಾಗಿದ್ದು, ದುಡಿಯುವ ವರ್ಗ ತಮ್ಮ ಮೈ ನೋವನ್ನು ಮರೆಯಲು ಉಳಿಸಿ ಬೆಳೆಸಿಕೊಂಡ ಸಂಸ್ಕೃತಿಯಾಗಿದೆ ಎಂದು ರಾಜ್ಯ ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯ ಘಟದ ಅಧ್ಯಕ್ಷ ಬಿ. ಗೋಪಾಲ್ ಅಭಿಪ್ರಾಯಪಟ್ಟರು.
ನಗರದ ಶತಮಾನೋತ್ಸವ ಭವನದಲ್ಲಿ ನವ್ಯ ಸಂಗಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಬೆಂಗಳೂರು ಇವರ ಆಶ್ರಯದಲ್ಲಿ ಭಾನುವಾರ ನಡೆದ ಜಾನಪದ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಇಂದಿನ ಜೀವನಶೈಲಿ ಹಾಗೂ ನಾಗರಿಕತೆಯ ಸೋಗಿಗೆ ಸಿಲುಕಿ ದಿಕ್ಕು ತಪ್ಪುತ್ತಿರುವ ಸಮಾಜವನ್ನು ಸರಿದಾರಿಗೆ ತರುವ ಅವಶ್ಯಕತೆ ಇದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್ ಅಭಿಪ್ರಾಯಪಟ್ಟರು. ಉತ್ತಮ ರೀತಿಯ ಜೀವನಶೈಲಿ, ಗ್ರಾಮೀಣ ಬದುಕು, ದೇಶಿ ಸಂಸ್ಕೃತಿ ಅಳವಡಿಸಿಕೊಂಡು ಬದುಕಬೇಕು ಎಂದರು.
ರಾಜ್ಯ ಶೋಷಿತ ವರ್ಗಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಸುರೇಶ್ ಕಂಠಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗೋ.ನಾ. ಸ್ವಾಮಿ, ಎಸ್ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷ ಎನ್.ಎಂ. ಶಂಭುಗೌಡ, ಕಲಾವಿದರಾದ ಉಮೇಶ್, ರವಿಕುಮಾರ್, ಸಿದ್ದರಾಮಯ್ಯ, ಜೈಪ್ರಕಾಶ್, ಸಿದ್ದರಾಜು, ರವಿಕುಮಾರ್, ಎಂ.ಎಲ್. ಶಂಕರಪ್ಪ, ಶಿವರಾಮು, ಚೌ.ಪು. ಸ್ವಾಮಿ, ಕಿರುತೆರೆ ಕಲಾವಿದರಾದ ಜಗಪ್ಪ ಮತ್ತು ಸುಶ್ಮಿತಾ ಭಾಗವಹಿಸಿದ್ದರು.
ಟ್ರಸ್ಟ್ ಕಾರ್ಯದರ್ಶಿ ಎಸ್. ಜಯಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ ಮಹೇಶ್ ಮೌರ್ಯ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದರು ವಿಶೇಷ ಕೋಳಿ ನೃತ್ಯ, ಯಕ್ಷಗಾನ, ದೊಡ್ಡಾಟ, ಪಟದ ಕುಣಿತ, ಪೂಜಾ ಕುಣಿತ, ತಮಟೆ ವಾದನ, ಕೀಲು ಕುದುರೆ, ಕಳಸ ಕುಣಿತ, ಸೋಮನ ಕುಣಿತ, ವೀರಗಾಸೆ, ರಂಗಗೀತೆ, ಸೋಬಾನೆ ಪದ ಮುಂತಾದ ಕಲಾ ಪ್ರದರ್ಶನ ನೀಡಿದರು. ಕೂಡ್ಲೂರು ಶಾಲೆಯ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.