ಚನ್ನಪಟ್ಟಣ: ತಾಲ್ಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದ ಮೂರು ಮಂದಿಗೆ ಬುಧವಾರ ಕೋವಿಡ್-19 ದೃಢವಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಗ್ರಾಮಕ್ಕೆ ತೆರಳಿ ಯಾರೂ ಬಾರದಂತೆ ಸೀಲ್ ಡೌನ್ ಮಾಡಿದರು.
ಈ ಮೊದಲು ಗ್ರಾಮದ ಒಬ್ಬ ಯುವಕನಿಗೆ ಕೋವಿಡ್ 19 ದೃಢಪಟ್ಟಿತ್ತು. ಆತನ ಸಂಪರ್ಕದಲ್ಲಿದ್ದ 24 ಮಂದಿಯನ್ನು ಕ್ವಾರಂಟೈನ್ನಲ್ಲಿಇಡಲಾಗಿತ್ತು. ಅವರಲ್ಲಿ ಮತ್ತೆ ಮೂರು ಮಂದಿಗೆ ಬುಧವಾರ ಕೋವಿಡ್ ದೃಢಪಟ್ಟಿರುವುದು ಖಚಿತವಾದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಸಂಜೆ ಬಂದ ಅಧಿಕಾರಿಗಳ ತಂಡ ಸೀಲ್ ಡೌನ್ ಮಾಡಿದರು. ಈ ಮೊದಲು ಯುವಕನಿಗೆ ಕೋವಿಡ್ ದೃಢಪಟ್ಟಿದ್ದ ವೇಳೆಯಲ್ಲಿಯೂ ಸೀಲ್ ಡೌನ್ ಮಾಡಲಾಗಿತ್ತು. ಆನಂತರ ತೆರವು ಮಾಡಲಾಗಿತ್ತು.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಿಗೆ ಮರದ ತುಂಡುಗಳನ್ನು ಇಟ್ಟು ರಸ್ತೆಗಳನ್ನು ಬಂದ್ ಮಾಡಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸ್ಥರು ಮನೆಯಿಂದ ಹೊರಗೆ ಬರಬಾರದು ಹಾಗೂ ಇತರೆಡೆಯಿಂದ ಗ್ರಾಮಕ್ಕೆ ಯಾರೂ ಬರಬಾರದು ಎನ್ನುವ ಉದ್ದೇಶದಿಂದ ಜಿಲ್ಲಾಡಳಿತದ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಭಾಗದಲ್ಲಿ ಈಗ ಕೋವಿಡ್ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.