ಮಾಗಡಿ: ತಾಲ್ಲೂಕಿನ ದೊಡ್ಡ ಮುದುಗೆರೆ ರಂಗನಾಥ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು.
ತಹಶೀಲ್ದಾರ್ ಶರತ್ ಕುಮಾರ್, ದೇವಾಲಯದ ಜೀರ್ಣೋದ್ಧಾರ ಮಾಡಿಸಿರುವ ಲಕ್ಷ್ಮಮ್ಮ, ಎಂ. ಗಿರಿ ಗೌಡ, ಭರಣಿ, ವಿವೇಕ್, ಐಯನಳ್ಳಿ ರಂಗಸ್ವಾಮಿ, ರಂಗನಾಥ ಸ್ವಾಮಿ, ಕಾಮಾಕ್ಷಿ ಅಮ್ಮನವರ ಯಾತ್ರದಾನ ಸೇವೆ ನೆರವೇರಿಸಿದರು.
ದೇವಾಲಯದ ರಥ ಬೀದಿಯಿಂದ ಬ್ರಾಹ್ಮಣರ ಬೀದಿಯ ಅರವಟಿಗೆಗಳಿಗೆ ತೆರಳಿ ಪೂಜೆ ಸ್ವೀಕರಿಸಲಾಯಿತು. ನಂತರ ಹೂವಿನಿಂದ ಅಲಂಕೃತವಾಗಿದ್ದ ರಥದ ಮೇಲೆ ಉತ್ಸವಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.
ಮಡಿವಾಳ ಸಮುದಾಯದವರು ಪಂಜಿನ ಸೇವೆ ಸಲ್ಲಿಸಿದರು. ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ತಹಶೀಲ್ದಾರ್ ಶರತ್ ಕುಮಾರ್ ರಥಕ್ಕೆ ಚಾಲನೆ ನೀಡಿದರು. ರಥಬೀದಿಯಲ್ಲಿ ಭಕ್ತರು ಪಾದಗಟ್ಟೆಯವರೆಗೆ ರಥವನ್ನು ಎಳೆದರು. ಕೋಸಂಬರಿ ನೀರು,ಮಜ್ಜಿಗೆ, ಪಾನಕ,ಹಲಸಿನಹಣ್ಣಿನ ರಾಸಾಯನಿಕ ವಿತರಿಸಲಾಯಿತು. ಸಹಸ್ರಾರು ಭಕ್ತರು ಸಾಲುಗಟ್ಟಿ ನಿಂತು ಮೂಲ ದೇವರ ದರ್ಶನ ಪಡೆದರು.
ಲಕ್ಷ್ಮಮ್ಮ, ಎಂ. ಗಿರಿ ಗೌಡ ಸಮುದಾಯ ಭವನದಲ್ಲಿ ಸಾಮೂಹಿಕ ದಾಸೋಹ ನಡೆಯಿತು ರಥಭೀದಿಯಲ್ಲಿ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ 6ಕ್ಕೆ ಪಾದಗಟ್ಟೆಯಿಂದ ಸ್ವಸ್ಥಾನಕ್ಕೆ ರಥವನ್ನು ಎಳೆದು ತಂದು ಭಕ್ತಿ ಸಮರ್ಪಿಸಲಾಯಿತ. ಬೆಂಗಳೂರು ತುಮಕೂರು ಕುಣಿಗಲ್ ಹಾಗೂ ಮಾಗಡಿ ತಾಲೂಕಿನ ವಿವಿಧೆಡೆಗಳಿಂದ ಹೆಚ್ಚಿನ ಜನಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಉರಿಬಿಸಿಲನ್ನು ಲೆಕ್ಕಿಸದೆ ರಥೋತ್ಸವದಲ್ಲಿ ನವಜೋಡಿಗಳು ಜೋಡಿ ಬಾಳೆಹಣ್ಣಿಗೆ ದವನ ಸಿಕ್ಕಿಸಿ ರಥದ ಮೇಲೆ ಎಸೆದು ಹರಕೆ ಸಲ್ಲಿಸಿದರು.