ಚನ್ನಪಟ್ಟಣ: ಸಮಾಜದ ರಕ್ಷಣೆಯ ಮಹತ್ತರ ಜವಾಬ್ದಾರಿ ಹೊತ್ತಿರುವ ಪೊಲೀಸರು ಪ್ರತಿಕ್ಷಣವು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಡಿವೈಎಸ್ಪಿ ಟಿ.ಮಲ್ಲೇಶ್ ಅಭಿಪ್ರಾಯಪಟ್ಟರು.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಹನುಮಂತೇಗೌಡ ಅವರಿಗೆ ಇಲಾಖೆ ವತಿಯಿಂದ ಬುಧವಾರ ಪಟ್ಟಣದಲ್ಲಿ ಆಯೋಜಿಸಿದ್ದ ಆತ್ಮೀಯ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಠಾಣೆಯಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿದ್ದೇವೆ ಎಂಬುದಕ್ಕಿಂತ ತಮ್ಮ ಸಹ ಸಿಬ್ಬಂದಿ, ಮೇಲಧಿಕಾರಿ ಹಾಗೂ ಜನಸಾಮಾನ್ಯರ ಜೊತೆ ಹೇಗೆ ವರ್ತಿಸಿದ್ದೇವೆ ಎಂಬುದು ಬಹಳ ಮುಖ್ಯ. ಅಧಿಕಾರ ದೊಡ್ಡದಿರಲಿ ಚಿಕ್ಕದಿರಲಿ ಮೊದಲು ಪ್ರಾಮಾಣಿಕ ಸೇವೆ ಅವಶ್ಯಕ ಎಂದರು.
ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಮಾತನಾಡಿ, ನಿವೃತ್ತಿ ನಂತರವೂ ತಮ್ಮ ಸೇವೆಯನ್ನು ಸಮಾಜದ ಪ್ರಗತಿಗೆ ವಿನಿಯೋಗಿಸಬೇಕು ಎಂದುಹನುಮಂತೇಗೌಡ ಅವರಿಗೆ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹನುಮಂತೇಗೌಡ, 33 ವರ್ಷಗಳ ಸುದೀರ್ಘ ಪೊಲೀಸ್ ಸೇವಾವಧಿಯಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದೇನೆ. ಸಮಾಜದ ರಕ್ಷಣೆಯಲ್ಲಿ ಅಳಿಲು ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದರು.
ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಶೋಕ್, ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಸಂತಕುಮಾರ್, ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.