ಚನ್ನಪಟ್ಟಣ: ಭಾರತದ ವಿರುದ್ಧ ನಿಂತಿರುವ ಚೀನಾ ದೇಶಕ್ಕೆ ಬುದ್ಧಿ ಕಲಿಸಲು ಆ ದೇಶದ ಉತ್ಪನ್ನಗಳ ಬಳಕೆ ನಿಲ್ಲಿಸಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟದ ಅಧ್ಯಕ್ಷ ರಮೇಶ್ ಗೌಡ ಆಗ್ರಹಿಸಿದರು.
ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ ದೇಶದ ಯೋಧರಿಗೆ ಪಟ್ಟಣದಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ಒಂದೂವರೆ ತಿಂಗಳಿನಿಂದ ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುತ್ತಾ ಬಂದಿರುವ ಚೀನಾಕ್ಕೆ ಬುದ್ಧಿ ಕಲಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.
ಹುತಾತ್ಮ ಸೈನಿಕರ ಶೌರ್ಯ, ತ್ಯಾಗ, ಬಲಿದಾನಗಳಿಗೆ ನಮನ ಸಲ್ಲಿಸಬೇಕಾದ್ದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ. ಚೀನಾದ ಮೊಬೈಲ್, ಟಿ.ವಿ, ರೇಷ್ಮೆ, ಆಟಿಕೆ, ಪಟಾಕಿ ಸೇರಿದಂತೆ ಚೀನಾದ ಉತ್ಪನ್ನಗಳನ್ನು ಖರೀದಿಸದಂತೆ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು ಎಂದರು.
ಸಮಾಜ ಸೇವಕ ಕೂರಣಗೆರೆ ರವಿ ಮಾತನಾಡಿ, ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬಾರದು ಎಂದರು.
ರೈತ ಮುಖಂಡ ಸುಜೀವನ್ ಕುಮಾರ್, ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಗೌಡ, ಪದಾಧಿಕಾರಿಗಳಾದ ಚೇತನ್ ಕೀಕರ್, ಮಳೂರುಪಟ್ಟಣ ರವಿ, ಇಕ್ಬಾಲ್ ಬೇಗ್, ಎಲ್.ಐ.ಸಿ. ನಾಗರಾಜು, ಮಂಗಳವಾರಪೇಟೆ ನಾಗೇಶ್ ಭಾಗವಹಿಸಿದ್ದರು.