ಮಾಗಡಿ: ಮನೆಯ ಕಸವನ್ನು ಬೀದಿಗೆ ಎಸೆಯಬೇಡಿ, ಕಸವನ್ನು ಹಸಿ ಮತ್ತು ತ್ಯಾಜ್ಯವನ್ನಾಗಿ ಬೇರ್ಪಡಿಸಿ ಪುರಸಭೆ ಕಸ ಸಾಗಿಸುವ ಗಾಡಿಯಲ್ಲಿ ಹಾಕಿ ನೈರ್ಮಲ್ಯ ಕಾಪಾಡಲು ಸಹಕರಿಸಿ ಎಂದು ಪುರಸಭೆ ಒಂದನೇ ವಾರ್ಡ್ ಸದಸ್ಯೆ ನಾಗರತ್ನಮ್ಮ ರಾಜಣ್ಣ ಮನವಿ ಮಾಡಿದರು.
ವಾರ್ಡ್ನ ಬೆಸ್ಕಾಂ ಪವರ್ ಸ್ಟೇಷನ್ ಹಿಂದಿನ ರಸ್ತೆ ಬದಿ ಶನಿವಾರ ಬೆಳಿಗ್ಗೆ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿವಾಸಿಗಳೆಲ್ಲರೂ ಮನೆಯ ಸುತ್ತಲಿನ ಕಸವನ್ನು ಸಂಗ್ರಹಿಸಿ, ಕಸದ ವಾಹನದಲ್ಲಿ ಹಾಕಬೇಕು. ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ. ಹಾಲಿನ ಪ್ಲಾಸ್ಟಿಕ್ ಕವರ್ಗಳನ್ನು ಬೀದಿಗೆ ಎಸೆಯುವ ಬದಲು ಕಸದ ವಾಹನಕ್ಕೆ ಹಾಕಬೇಕು. ಎಲ್ಲವನ್ನೂ ಪುರಸಭೆಯೇ ಮಾಡಲಿ ಎಂದು ಕಾಯುವ ಬದಲು ಸ್ವಚ್ಛತೆ ಕಾಪಾಡಲು ಎಲ್ಲರೂ ಮುಂದಾಗಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡ ರಮೇಶ್ ಮಡಿವಾಳ ಮಾತನಾಡಿ, ಒಂದನೇ ವಾರ್ಡ್ನಲ್ಲಿ ಕುಡಿಯುವ ನೀರು ಸರಬರಾಜು, ಬೀದಿದೀಪ, ಚರಂಡಿಗಳ ಸ್ವಚ್ಛತೆಯನ್ನು ಮೊದಲ ಆದ್ಯತೆಯಾಗಿ ಇಟ್ಟುಕೊಂಡು ಕೆಲಸ ಮಾಡುವಂತೆ ಶಾಸಕ ಎ.ಮಂಜುನಾಥ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಅದರಂತೆ ಸ್ವಚ್ಛತಾ ಆಂದೋಲನ ನಡೆಯುತ್ತಿದೆ ಎಂದರು.