ಮಾಗಡಿ: ‘ಕೋವಿಡ್ ಸೋಂಕಿತರ ಸೇವೆ ಮಾಡಲು ಹೆದರಿಕೆಯಿಲ್ಲ. ಶುಶ್ರೂಷಕಿಯಾಗಿ ನೋವಿನಿಂದ ನರಳುತ್ತಿರುವವರಿಗೆ ಸೇವೆ ಸಲ್ಲಿಸುತ್ತಿರುವ ಬಗ್ಗೆ ಹೆಮ್ಮೆ ಇದೆ’ ಇದು ಮಾಗಡಿ ಸರ್ಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಕೆಲಸ ಮಾಡುತ್ತಿರುವ ಜಾನಕಿ ನಾಗಮ್ಮ ದೇವಾಡಿಗ ಅವರ ಮಾತು.
ಕೋವಿಡ್ ಸೋಂಕು ಕಾಣಿಸಿಕೊಂಡ ಆರಂಭದಿಂದಲೂ ಕೋವಿಡ್ ವಾರ್ಡ್ನಲ್ಲಿ ಸೋಂಕಿತರ ಆರೈಕೆ ಮಾಡುತ್ತಿದ್ದಾರೆ. ಸೋಂಕಿತರು ವಾರ್ಡ್ಗೆ ಬರುವಾಗ ಅವರ ನೋವು ನಮಗೆ ಅರ್ಥವಾಗುತ್ತದೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್, ತಜ್ಞ ವೈದ್ಯ ಡಾ.ಯಶವಂತ್ ಮತ್ತು ನರ್ಸಿಂಗ್ ಅಧೀಕ್ಷಕಿ ಪದ್ಮಾ ಮಾರ್ಗದರ್ಶನದಲ್ಲಿ ಸೋಂಕಿತರ ಆಮ್ಲಜನಕದ ಪ್ರಮಾಣ, ದೇಹದ ಉಷ್ಣತೆಯ ಪ್ರಮಾಣ ತಪಾಸಣೆ ಮಾಡುತ್ತೇವೆ. ಇದೆಲ್ಲವೂ ಕ್ಷಣಾರ್ಧದಲ್ಲಿ ನಡೆಯುತ್ತವೆ. ಸೋಂಕಿತರ ದೇಹದ ಸ್ಥಿತಿಗತಿ ಯಾವ ಕ್ಷಣದಲ್ಲಿ ಬದಲಾಗುತ್ತದೆ ಎಂಬುದು ತಿಳಿಯುವುದಿಲ್ಲ. ಸಾವಿನ ಮನೆಗೆ ಪ್ರಯಾಣಿಸುವವರಂತೆ ಕೆಲವು ಸೋಂಕಿತರು ಜೀವನದಲ್ಲಿ ಎಲ್ಲವೂ ಮುಗಿಯಿತು ಎಂಬ ಭಯದಿಂದಿರುತ್ತಾರೆ ಎಂದು ಮಾತು ಮುಂದುವರಿಸಿದರು.
ವೈದ್ಯರ ಸಲಹೆ ಮೇರೆಗೆ ಸೋಂಕಿತರಿಗೆ ಮೊದಲು ಧೈರ್ಯ ತುಂಬುತ್ತೇವೆ. ಮೊದಲ ಅಲೆಯಲ್ಲಿ ಬರುತ್ತಿದ್ದ ಸೋಂಕಿತರಿಗೂ, ಎರಡನೆ ಅಲೆಯಲ್ಲಿ ಬರುತ್ತಿರುವ ಸೋಂಕಿತರಿಗೂ ವ್ಯತ್ಯಾಸಗಳಿವೆ. ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ಸುದ್ದಿ ಮತ್ತು ಚಿತ್ರಣ ಕಂಡು ಸೋಂಕಿತರು ಆತಂಕಕ್ಕೆ ಒಳಗಾಗುತ್ತಿದ್ದಾರೆ.ಎರಡನೇ ಅಲೆಯಲ್ಲಿ ಗಂಭೀರ ಸಮಸ್ಯೆ ಅಧಿಕವಾಗುತ್ತಿವೆ. ಇವರಿಗೆ ಎಚ್ಚರಿಕೆಯಿಂದಲೇ ಚಿಕಿತ್ಸೆ ನೀಡಬೇಕಿದೆ. ಪಿಪಿಇ ಕಿಟ್ ಧರಿಸುವುದು ಕಠಿಣ ನಿಜ. ಆದರೆ ನೋವುಂಡವರ ಸೇವೆ ಮಾಡುವುದು ಪುಣ್ಯದ ಕೆಲಸ ಎಂದರು.
ನರ್ಸ ವೃತ್ತಿ ಧೈರ್ಯ, ತಾಳ್ಮೆ, ಜೀವನದಲ್ಲಿ ಎದುರಾಗುವ ನೋವುಗಳನ್ನು ಸಹಿಸುವ ಶಕ್ತಿ ನೀಡಿದೆ. ಸೋಂಕಿನೊಡನೆ ಸೆಣಸುವವರನ್ನು ನೋಡಿದಾಗ ನಮ್ಮ ತಾಯಿ,ತಂದೆಯ ನೆನಪಾಗುತ್ತದೆ. ಸೋಂಕಿನಿಂದ ಪಾರಾಗಿ ಮನೆಗೆ ತೆರಳುವವರು, ‘ಮಗಳೆ ನಿಮ್ಮ ಹೆತ್ತವರಿಗೆ ಒಳಿತಾಗಲಿ, ದೇವರು ನಿಮಗೆ ಒಳಿತು ಮಾಡುತ್ತಾನೆ ಎಂದು ಹಾರೈಕೆಯೇ ನಮಗೆ ಶ್ರೀರಕ್ಷೆ’ ಎನ್ನುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.