ಚನ್ನಪಟ್ಟಣ: ನಗರದಲ್ಲಿ ಸೋಮವಾರ ಮಧ್ಯಾಹ್ನ ಬಿರುಗಾಳಿ ಸಹಿತ ಮಳೆ ಸುರಿಯಿತು. ಬಿರುಗಾಳಿಗೆ ನಗರದ ಎಂ.ಜಿ.ರಸ್ತೆಯ ಮಿಷನ್ ಆಸ್ಪತ್ರೆ ಬಳಿ ಇದ್ದ ಭಾರಿ ನೀಲಗಿರಿ ಮರದ ಕೊಂಬೆಯೊಂದು ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದ ಘಟನೆ ನಡೆದಿದೆ.
ವಿದ್ಯುತ್ ಲೈನ್ ಮೇಲೆ ಕೊಂಬೆ ಬಿದ್ದ ತಕ್ಷಣ ವಿದ್ಯುತ್ ಕಡಿತಗೊಂಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆ ಮರದಡಿ ಫುಟ್ಪಾತ್ನಲ್ಲಿ ತಳ್ಳುಗಾಡಿಯಲ್ಲಿ ಕೆಲವರು ವ್ಯಾಪಾರ ಮಾಡುತ್ತಿದ್ದರು. ಮರದ ಕೊಂಬೆ ಮುರಿಯುವ ಶಬ್ದ ಕೇಳಿ ವ್ಯಾಪಾರಸ್ಥರು ಸ್ಥಳದಿಂದ ಓಡಿದ ಕಾರಣ ಯಾರಿಗೂ ಯಾವುದೇ ಅಪಾಯವಾಗಿಲ್ಲ.
ನಗರದ ಪ್ರಮುಖ ರಸ್ತೆಯಾದ ಎಂ.ಜಿ.ರಸ್ತೆಯಲ್ಲಿ ಘಟನೆ ನಡೆದ ಕಾರಣ ಸ್ಥಳದಲ್ಲಿದ್ದವರು ಭೀತಿಗೊಂಡಿದ್ದರು. ವಿಷಯ ತಿಳಿದ ಬೆಸ್ಕಾಂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದು ಮರ ತೆರವುಗೊಳಿಸಿದರು.
ತಾಲ್ಲೂಕಿನ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಮರದ ಕೊಂಬೆಗಳು ಉರುಳಿ ಬಿದ್ದವೆ. ಬಿರುಗಾಳಿ ಸಹಿತ ಮಳೆ ಬಂದ ಕಾರಣ ಸಾರ್ವಜನಿಕರು ಭೀತಿಗೊಂಡರು.