ಕುದೂರು: ಹೋಬಳಿಯ ಬಿಸ್ಕೂರು ಗ್ರಾಮದ ವೆಂಕಟರಮಣ (ರಂಗನಾಥ) ಬ್ರಹ್ಮರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಯುಗಾದಿ ಹಬ್ಬದ ನಂತರ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ಗ್ರಾಮಸ್ಥರೆಲ್ಲರೂ ಭಕ್ತಿಯಿಂದ ಪಾಲ್ಗೊಂಡಿದ್ದು ವಿಶೇಷ. ಈ ಜಾತ್ರಾ ಮಹೋತ್ಸವದಲ್ಲಿ ಮೊದಲಿಗೆ ದೇವರ ಉತ್ಸವ ನಡೆಯುತ್ತದೆ.
ತೇರಿನಲ್ಲಿ ರಂಗನಾಥ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯ ಆವರಣದಲ್ಲಿ ಭಕ್ತರ ಸಮ್ಮುಖ ಮಂಗಳ ವಾದ್ಯಗಳೊಂದಿಗೆ ಪ್ರದಕ್ಷಿಣೆ ಹಾಕಲಾಯಿತು. ನಂತರ ರಥ, ಗ್ರಾಮದ ರಾಜ ಬೀದಿಗಳಲ್ಲಿ ಸಾಗಿತು. ನೆರೆದಿದ್ದ ಭಕ್ತರೆಲ್ಲರೂ ರಂಗನಾಥನ ನಾಮಸ್ಮರಣೆ ಮಾಡುತ್ತಾ ಬಾಳೆಹಣ್ಣು ಹಾಗೂ ಹೊಂಬಾಳೆಗಳನ್ನು ತೇರಿನ ಕಳಸಕ್ಕೆ ಎಸೆದು ಭಕ್ತಿಯಿಂದ ದೇವರಿಗೆ ನಮಸ್ಕರಿಸಿದರು.
ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಎಲ್ಲಾ ಭಕ್ತರಿಗೆ ಪ್ರಸಾದ, ನೀರುಮಜ್ಜಿಗೆ, ಪಾನಕ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುತ್ತಮುತ್ತಲ ಗ್ರಾಮಗಳಾದ ಹೊಸಪಾಳ್ಯ, ಕುಪ್ಪೇಪಾಳ್ಯ ಸೇರಿದಂತೆ ಹಲವು ಗ್ರಾಮಗಳ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಅಲಂಕೃತ ರಂಗನಾಥ ಮೂರ್ತಿ
ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಜಾತ್ರೆ ಹಿನ್ನೆಲೆಯಲ್ಲಿ ರಥ ಬೀದಿಗಳಲ್ಲಿ ಆಟಿಕೆ ಸಾಮಾನು, ತಿಂಡಿ ತಿನಿಸುಗಳ ಮಳಿಗೆಗಳು ತೆರೆದಿದ್ದವು. ಬ್ರಹ್ಮರಥೋತ್ಸವದಲ್ಲಿ ತಹಶೀಲ್ದಾರ್ ಡಿ.ಪಿ. ಶರತ್ ಕುಮಾರ್, ಶಾಸಕ ಎಚ್.ಸಿ. ಬಾಲಕೃಷ್ಣ ಪಾಲ್ಗೊಂಡಿದ್ದರು.