ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆ ಎಂದು ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಡಾ. ಚಿನ್ನಪ್ಪ ವೈ. ಚಿಕ್ಕಹಾಗಡೆ ಗುರುವಾರ ದೂರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಹಲವೆಡೆ ಸಂಸದ ಡಿ.ಕೆ. ಸುರೇಶ್ ಅವರ ಭಾವಚಿತ್ರಗಳು ಕಂಡುಬರುತ್ತಿವೆ. ಅಲ್ಲಲ್ಲಿ ಸೀರೆ, ಕುಕ್ಕರ್ ಸೇರಿದಂತೆ ಹಲವು ವಸ್ತುಗಳನ್ನು ಹಂಚಿ ಆಮಿಷ ಒಡ್ಡಲಾಗುತ್ತಿದೆ. ಇದರ ಬಗ್ಗೆ ಚುನಾವಣಾ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.
ದೇಶದಲ್ಲಿ ಸಂವಿಧಾನವನ್ನು ಯಥಾವತ್ತಾಗಿ ಜಾರಿಗೆ ತರುವುದು ಬಿಎಸ್ಪಿಯ ಪ್ರಮುಖ ಕಾರ್ಯತಂತ್ರವಾಗಿದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಪ್ರಜ್ಞಾವಂತ ಸಮುದಾಯ ಬೆಂಬಲಿಸುವ ವಿಶ್ವಾಸವಿದೆ ಎಂದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಎಂ. ನಾಗೇಶ್ ಮಾತನಾಡಿ, ಡಿ.ಕೆ.ಸುರೇಶ್ ಅವರು ಮೂರು ಬಾರಿ ಸಂಸದರಾಗಿದ್ದರೂ ಯಾವುದೇ ಶಾಶ್ವತ ಯೋಜನೆ ಮಾಡಿಲ್ಲ. ಅಧಿಕಾರವಿದ್ದರೂ ಮೇಕೆದಾಟು ಯೋಜನೆಯ ಬಗ್ಗೆ ಬದ್ಧತೆ ಪ್ರದರ್ಶಿಸಿಲ್ಲ. ಡಿ.ಕೆ. ಸಹೋದರರು ತಮ್ಮ ಅಕ್ರಮ ಸಂಪಾದನೆಯನ್ನು ಕಾಪಾಡಿಕೊಳ್ಳಲು ರಾಜಕಾರಣ ನಡೆಸುತ್ತಿದ್ದಾರೆಯೇ ಹೊರತು ಜನಪರ ಕಾಳಜಿಯಿಂದ ಅಲ್ಲ ಎಂದು ಟೀಕಿಸಿದರು.
ಕ್ಷೇತ್ರದ ಚುನಾವಣಾ ಉಸ್ತುವಾರಿ ಅನ್ನದಾನಪ್ಪ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷರಾದ ಮಹದೇವ್, ದೇವರಾಜು, ಜಿಲ್ಲಾ ಸಂಯೋಜಕ ವೆಂಕಟಾಚಲ, ಮಹಿಳಾ ಘಟಕದ ಅನು, ಮುಖಂಡರಾದ ಚಂದ್ರಕಾಂತ್, ರಮೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೂಡ್ಲೂರು ಕಾಂತರಾಜ್, ಇತರರು ಹಾಜರಿದ್ದರು.