ಮಾಗಡಿ: ಭಾರತೀಯ ಧಾರ್ಮಿಕ ಪರಂಪರೆಯ ಸಾಕ್ಷಿಪ್ರಜ್ಞೆಯಂತಿದ್ದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಜನತೆಗೆ ತಲುಪಿಸಿದರೆ ರಾಷ್ಟ್ರಪ್ರಜ್ಞೆ ಬೆಳಗಲಿದೆ ಎಂದು ತಾಲ್ಲೂಕು ಮಾಚಿದೇವ ಮಡಿವಾಳರ ಸಂಘದ ಅಧ್ಯಕ್ಷ ಶಿವಣ್ಣ ಕಲ್ಲೂರು ತಿಳಿಸಿದರು.
ತಾಲ್ಲೂಕು ಮಾಚಿದೇವ ಮಡಿವಾಳ ಸಂಘದ ವತಿಯಿಂದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಅವರು ಮಾತನಾಡಿದರು.
ವೀರಸನ್ಯಾಸಿ ವಿವೇಕಾನಂದ ಕಡಲಿನಾಚೆಯ ದೇಶಗಳಿಗೆ ತೆರಳಿ ಸನಾತನ ಧಾರ್ಮಿಕ ಭಾರತೀಯತೆಯನ್ನು ಪರಿಚಯಿಸಿದರು. ಯುವಜನತೆಯ ಹೃದಯಮಂದಿರದಲ್ಲಿ ಶೌರ್ಯಧೈರ್ಯದ ಪರಿಕಲ್ಪನೆಯನ್ನು ತುಂಬಲು ದೇಶದಾದ್ಯಂತ ಸಂಚರಿಸಿದರು. ಆಧ್ಯಾತ್ಮಿಕ ಸಂತ ಶ್ರೀರಾಮಕೃಷ್ಣ ಪರಮಹಂಸರು ಮತ್ತು ಶಾರದಾ ಮಾತೆಯರ ಪದತಲದಲ್ಲಿ ದಕ್ಷಿಣೇಶ್ವರದಲ್ಲಿ ಬೆಳೆದರು. ಯುವಜನತೆಗೆ ವಿವೇಕಾನಂದರ ಜೀವನದ ಮಹತ್ವವನ್ನು ತಿಳಿಸಿಕೊಡುವ ಕೆಲಸ ಮಾಡಬೇಕಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶ್ರೀನಿವಾಸ್ ಮಾತನಾಡಿ, ‘ಅಸಮಾನತೆಯನ್ನು ಬೇರುಸಹಿತ ಕಿತ್ತೊಗೆಯಬೇಕು. ದೀನರ ಸೇವೆ ಮಾಡಬೇಕು. ಅರ್ಥವಿಲ್ಲದ ಸಂಪ್ರದಾಯಗಳನ್ನು ತ್ಯಜಿಸಬೇಕು. ವಿಶ್ವದ ಆಧ್ಯಾತ್ಮಿಕತೆಯ ಸಂಕೇತದಂತಿರುವ ಹಿಂದೂಧರ್ಮದಲ್ಲಿನ ಸಹಭಾಳ್ವೆ, ಶಾಂತಿ ಸಂದೇಶಗಳನ್ನು ಎಲ್ಲರಿಗೂ ತಿಳಿಸುವುದೇ ನಾವು ವಿವೇಕಾನಂದರಿಗೆ ಸಲ್ಲಿಸುವ ಗೌರವವಾಗಿದೆ’ ಎಂದರು.
ಸಂಘದ ಪದಾಧಿಕಾರಿಗಳಾದ ಎಂ.ಟಿ.ಶಿವಣ್ಣ, ಹರೀಶ್ ಕುಮಾರ್ , ರಾಜಣ್ಣ, ಚಂದ್ರಪ್ಪ, ನಾಗಣ್ಣ, ರವಿಕುಮಾರ್, ಮುನಿರಾಜು, ಭರತ್, ಗಂಗಣ್ಣ, ಜಿ.ಕೆ.ಚಂದ್ರಶೇಖರ್, ವೆಂಕಟೇಶ್, ಬಿ.ಜಿ.ಚಂದ್ರಶೇಖರ್ ಸ್ವಾಮಿ ವಿವೇಕಾನಂದರ ಜೀವನದ ಘಟನೆಗಳನ್ನು ಕುರಿತು ಮಾತನಾಡಿದರು.