ರಾಮನಗರ: ಮೇಕೆದಾಟು ಯೋಜನೆ ಸಂಬಂಧ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇವೆ. ತೀರ್ಪಿನ ಬಳಿಕ ನಮ್ಮ ಸರ್ಕಾರವೇ ಯೋಜನೆಗೆ ಚಾಲನೆ ನೀಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದರು.
‘ಕಾವೇರಿ ಬಗ್ಗೆ ನಮಗೆ ಅಪಾರ ಪ್ರೀತಿ ಇದೆ. ಆದರೆ, ಕಾವೇರಿ ತೀರ್ಪು ಬಂದ ವೇಳೆ ಕಾಂಗ್ರೆಸ್ ಸರ್ಕಾರವೇ ಇದ್ದರೂ ಅಣೆಕಟ್ಟೆ ಕಟ್ಟಲು ಏಕೆ ಮುಂದಾಗಲಿಲ್ಲ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮೇಕೆದಾಟಿನಲ್ಲಿ ಅಣೆಕಟ್ಟು ಕಟ್ಟಿದ ಕೂಡಲೇ ಕಾವೇರಿ ಕಣಿವೆಯ ಸಮಸ್ಯೆ ಪರಿಹಾರವಾಗುವುದಿಲ್ಲ. ಕಾವೇರಿ ಕೊಳ್ಳದ ಬಗ್ಗೆ ಕೋರ್ಟ್ ನಿರ್ಧಾರದ ಬಳಿಕ ಕಾಂಗ್ರೆಸ್ ಯಾವುದೇ ನೀರಾವರಿ ಯೋಜನೆಯನ್ನು ಮಾಡಿಲ್ಲ. ಕಾವೇರಿ ಹರಿಯುವ ಕಡೆಗಳಲ್ಲಿ ಹಲವಾರು ವಿದ್ಯುತ್ ಉತ್ಪಾದನಾ ಘಟಕಗಳನ್ನು ಮಾಡಬಹುದಿತ್ತು.
ಜಲಸಂಪನ್ಮೂಲ ಸಚಿವರು, ಇಂಧನ ಸಚಿವರಾಗಿ ಕೆಲಸ ಮಾಡಿದ ಡಿ.ಕೆ. ಶಿವಕುಮಾರ್ ಇದ್ಯಾವುದನ್ನೂ ಮಾಡದೆ ತಮಗೆ ಬೇಕಾದ ಚೇಲಾಗಳಿಗೆ ಮೂರು ಸೆಕೆಂಡುಗಳಲ್ಲೇ ಸೌರ ವಿದ್ಯುತ್ ಘಟಕಗಳನ್ನು ಹಾಕಿಕೊಳ್ಳಲು ಸಹಿ ಹಾಕಿಕೊಡುತ್ತಿದ್ದರು. ಸಚಿವರಾಗಿ ಡಿಕೆಶಿ ಯಾವುದೇ ಸಾಕ್ಷಿ ಗುಡ್ಡೆ ಬಿಟ್ಟಿಲ್ಲ’ ಎಂದು ಕಿಡಿಕಾರಿದರು.
‘ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆಗಿದ್ದವರು. ಪಾದಯಾತ್ರೆಯಲ್ಲಿ ಭಾಗಿ ಆಗುವ ಮುನ್ನ ಅವರಾದರೂ ಯೋಚನೆ ಮಾಡಬೇಕಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಇದೇ ಶಿವಕುಮಾರ್ ರನ್ನು ಒಂದು ವರ್ಷ ತನ್ನ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಇಂತಹ ಕ್ರಿಮಿನಲ್ಗಳ ಜೊತೆ ಸೇರಿ ಸರ್ಕಾರ ನಡೆಸಲಾರೆ ಎಂದಿದ್ದರು’ ಎಂದು ಸ್ಮರಿಸಿದರು.
ನಮ್ಮ ಸರ್ಕಾರ ಕಳೆದ ನಾಲ್ಕು ದಿನದಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ನ್ಯಾಯಾಲಯ ಮಧ್ಯ ಪ್ರವೇಶಿಸುವ ಮುನ್ನವೇ ಕ್ರಮ ಕೈಗೊಳ್ಳಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಹಳೇ ಮೈಸೂರು ಭಾಗದಲ್ಲಿ ಜೋಡೆತ್ತುಗಳು ಬೇರೆ ಆಗಿವೆ. ಇದರಿಂದ ಡಿಕೆಶಿಗೆ ಬಲ ಕಡಿಮೆಯಾಗಿದೆ. ಹೀಗಾಗಿ ಪಾದಯಾತ್ರೆಯಂತಹ ಯೋಜನೆಗಳನ್ನು ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.