ಕನಕಪುರ: ‘ಜನರು ಸಮಸ್ಯೆ ಹೊತ್ತು ಆಸ್ಪತ್ರೆಗೆ ಹೋಗುತ್ತಿದ್ದರು. ಆದರೆ, ಜನರ ಸಮಸ್ಯೆಗಳನ್ನು ಕೇಳಿ ಅದಕ್ಕೆ ಪರಿಹಾರ ಕೊಡಲು ಡಾ.ಮಂಜುನಾಥ್ ಅವರೇ ಈಗ ನಿಮ್ಮ ಬಳಿ ಬರುತ್ತಿದ್ದಾರೆ. ನಿಮ್ಮ ಸೇವೆ ಮಾಡಲು ಅಮೂಲ್ಯವಾದ ಮತ ನೀಡಿ ಒಂದು ಅವಕಾಶ ಮಾಡಿಕೊಡಿ’ ಎಂದು ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಅವರ ಪತ್ನಿ ಅನಸೂಯ ಮತದಾರರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಸಾತನೂರು ಹೋಬಳಿ ವ್ಯಾಪ್ತಿ ಗುರುವಿನಪುರ ಗ್ರಾಮದಲ್ಲಿ ಶನಿವಾರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಆಸ್ಪತ್ರೆಯಲ್ಲಿ ನಿರ್ದೇಶಕರಾಗಿದ್ದ ಅವಧಿಯಲ್ಲಿ ಯಾವುದೇ ಸ್ವಾರ್ಥ ಇಲ್ಲದೆ ಬಡವರಿಗಾಗಿ ಕೆಲಸ ಮಾಡಿ ಹಲವು ಕುಟುಂಬಗಳ ಮನೆ ದೀಪ ಅರದಂತೆ ನೋಡಿಕೊಂಡಿದ್ದಾರೆ. ಹೃದಯ ಸಂಬಂಧ ಕಾಯಿಲೆ ಇದ್ದವರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಚಿಕಿತ್ಸೆ ನೀಡಿ ಅವರ ಪ್ರಾಣ ಉಳಿಸಿದ್ದಾರೆ. ಅವರು ನಿವೃತ್ತಿಯಾದ ನಂತರ ಜನಸೇವೆ ಮುಂದುವರಿಸಲು ರಾಜಕೀಯಕ್ಕೆ ಬಂದಿದ್ದಾರೆ ಎಂದರು.
ಕೇಂದ್ರದ ಬಿಜೆಪಿ ನಾಯಕರು ಡಾಕ್ಟರ್ ಅವರ ಸೇವೆ ಗುರುತಿಸಿ ರಾಷ್ಟ್ರಮಟ್ಟದಲ್ಲಿ ಜನಸೇವೆ ಮಾಡಲು ಅವಕಾಶ ಕಲ್ಪಿಸಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಇಲ್ಲಿ ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳ ಮೈತ್ರಿಯಾಗಿದೆ. ಎರಡು ಪಕ್ಷದ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸಬೇಕು ಎಂದು ಮನವಿ
ಮಾಡಿದರು.
ಕಬ್ಬಾಳಮ್ಮನಿಗೆ ಪೂಜೆ: ಪ್ರಚಾರಕ್ಕೂ ಮೊದಲು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರೊಂದಿಗೆ ಕಬ್ಬಾಳಮ್ಮನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು.
ಸಾತನೂರು ಹೋಬಳಿ ವ್ಯಾಪ್ತಿಯ ಗುರುವಿನಪುರ, ಕಂಚನಹಳ್ಳಿ, ಕಚ್ಚುವನಹಳ್ಳಿ, ಕಂಸಾಗರ, ಬಾಪೂಜಿ ಕಾಲೋನಿ, ಕಬ್ಬಾಳು, ದಾಳಿಂಬ, ಅರಕಟ್ಟೆದೊಡ್ಡಿ, ವಡ್ಡರದೊಡ್ಡಿ, ಸಾತನೂರು, ಹೊನ್ನಿಂಗನಹಳ್ಳಿ, ಗೇರಹಳ್ಳಿ, ಕಾಡಹಳ್ಳಿ, ಭೂಹಳ್ಳಿ, ದೂಂತೂರು, ಹಲಸೂರು, ಬೋರೇಗೌಡನದೊಡ್ಡಿ, ಹರಿಹರ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ಸುಡು ಬಿಸಿಲು ಲೆಕ್ಕಿಸದೆ ಮನೆ ಮನೆಗೆ ತೆರಳಿ ವಿಶೇಷವಾಗಿ ಮಹಿಳಾ ಮತದಾರರನ್ನು ಮಾತನಾಡಿಸಿ ಮತಯಾಚನೆ ಮಾಡಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ನಾಗರಾಜು, ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಚಿನ್ನಸ್ವಾಮಿ, ಮುಖಂಡ ಬಾಲನರಸಿಂಹಯ್ಯ, ಪುಟ್ಟರಾಜು, ಕಬ್ಬಾಳೇಗೌಡ, ಕುರುಬಳ್ಳಿ ರಾಜೇಶ್, ಅನುಕುಮಾರ್, ಗೇರಹಳ್ಳಿ ರಾಜೇಶ್, ಸಣ್ಣಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಪಿ.ಕುಮಾರ್, ಮಾಜಿ ಅಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಸುನಿಲ್, ಮುನಿಸಿದ್ದೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.