ಶಿವಮೊಗ್ಗ:ನಗರಪಾಲಿಕೆ ಎರಡನೇ ಅವಧಿಯ ಮೇಯರ್, ಉಪ ಮೇಯರ್ಸ್ಥಾನಕ್ಕೆಜ.29ರಂದು ಚುನಾವಣೆನಡೆಯಲಿದ್ದು, ನಿರೀಕ್ಷೆಯಂತೆ ಬಹುಮತಹೊಂದಿರುವಬಿಜೆಪಿಯ ಅನಿತಾ ರವಿಶಂಕರ್ ಅಥವಾ ಸವರ್ಣಾ ಶಂಕರ್ ಮೇಯರ್ ಸ್ಥಾನ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
ಮೇಯರ್ ಆಕಾಂಕ್ಷಿಗಳಾಗಿದ್ದ ಇಬ್ಬರಜಾತಿ ಪ್ರಮಾಣಪತ್ರಗಳುವಿವಾದಕ್ಕೆ ಕಾರಣವಾಗಿತ್ತು. ಇಬ್ಬರ ವಿರುದ್ಧ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅನಿತಾವಿರುದ್ಧದ ಅರ್ಜಿಯನ್ನು ತಾಂತ್ರಿಕ ಕಾರಣ ನೀಡಿ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ತಿರಸ್ಕರಿಸಿದ್ದಾರೆ.ಸುವರ್ಣಾ ವಿರುದ್ಧದ ಅರ್ಜಿಯನ್ನು ಉಪ ವಿಭಾಗಾಧಿಕಾರಿ ಮಾನ್ಯ ಮಾಡಿದ್ದರು. ಜಾತಿ ಪ್ರಮಾಣ ಪತ್ರ ಅಸಿಂಧುಗೊಳಿಸಿದ್ದರು. ಅವರ ಆದೇಶಕ್ಕೆ ಹೈಕೋರ್ಟ್ನಿಂದ ತಡೆ ನೀಡಿದೆ. ಹಾಗಾಗಿ, ಚುನಾವಣೆಗೆ ಸ್ಪರ್ಧಿಸಲು ಇಬ್ಬರಿಗೂ ಇದ್ದ ಅಡ್ಡಿ ನಿವಾರಣೆಯಾಗಿದೆ. ಕಾಂಗ್ರೆಸ್ನಿಂದ ಯಮುನಾ ರಂಗೇಗೌಡ ನಾಮಪತ್ರ ಸಲ್ಲಿಸಿದ್ದಾರೆ.
ಮೇಯರ್ ಸ್ಥಾನ ಬಿಸಿಎಂ ‘ಬಿ’ ವರ್ಗದ ಮಹಿಳೆಗೆ, ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲೇ 12 ಮಹಿಳೆಯರು ಇದ್ದಾರೆ. ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ ಮಧ್ಯೆ ಪೈಪೋಟಿ ನಡೆದಿದೆ. ಕಾಂಗ್ರೆಸ್ನಿಂದ ಮೆಹತ್ ಷರೀಫ್ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಮೊದಲ ಅವಧಿಯಲ್ಲಿ ಲತಾ ಗಣೇಶ್ ಮೇಯರ್ (ಪರಿಶಿಷ್ಟ ಜಾತಿ ಮಹಿಳೆ) ಹಾಗೂ ಎಸ್.ಎನ್. ಚನ್ನಬಸಪ್ಪ (ಸಾಮಾನ್ಯ ವರ್ಗ) ಉಪ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಯ 23 (ಮೂವರು ಪಕ್ಷೇತರರು ಸೇರಿ), ಕಾಂಗ್ರೆಸ್ನ 8 (ಒಬ್ಬರು ಪಕ್ಷೇತರರು ಸೇರಿ), ಜೆಡಿಎಸ್ನ 2 ಎಸ್ಟಿಪಿಐನ ಒಬ್ಬರು ಹಾಗೂ ಒಬ್ಬರು ಪಕ್ಷೇತರರು ಇದ್ದಾರೆ.
ಒಬ್ಬರು ಸಂಸದರು (ಬಿಜೆಪಿ), ಇಬ್ಬರು ಶಾಸಕರು (ಬಿಜೆಪಿ), ವಿಧಾನ ಪರಿಷತ್ನ ನಾಲ್ವರು ಸದಸ್ಯರು (ಇಬ್ಬರು ಬಿಜೆಪಿ, ಒಬ್ಬರು ಕಾಂಗ್ರೆಸ್ ಹಾಗೂ ಜೆಡಿಎಸ್) ಸೇರಿ ಒಟ್ಟು 42 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಬಿಜೆಪಿ ಸ್ಪಷ್ಟ ಬಹುಮತ ಹೊಂದಿರುವ ಕಾರಣಎರಡೂ ಸ್ಥಾನಗಳು ಆ ಪಕ್ಷದ ಪಾಲಾಗುವುದು ಖಚಿತ.
ದರ್ಶನ ನೆಪದಲ್ಲಿ ಪ್ರವಾಸ: ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದ ಇಬ್ಬರ ಜಾತಿ ಪ್ರಮಾಣ ಪತ್ರಗಳ ವಿರುದ್ಧ ಪ್ರಕರಣ ದಾಖಲಾದ ಕಾರಣ ಬಿಜೆಪಿ ಸದಸ್ಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ಒಂದು ವೇಳೆ ಜಾತಿ ಪ್ರಮಾಣ ಪತ್ರಗಳು ಅಸಿಂಧುಗೊಂಡರೆ ಅನಾಯಾಸವಾಗಿ ಮೇಯರ್ ಸ್ಥಾನ ಕಾಂಗ್ರೆಸ್ ಪಾಲಾಗುತ್ತಿತ್ತು. ಇದರಿಂದ ಬಿಜೆಪಿ ಸದಸ್ಯರು ದೇವರ ದರ್ಶನದ ನೆಪದಲ್ಲಿ ಎರಡು ದಿನಗಳ ಹಿಂದೆಯೇ ಮೈಸೂರಿಗೆ ಪ್ರವಾಸಕ್ಕೆ ತೆರಳಿದ್ದರು. ಮಂಗಳವಾರ ರಾತ್ರಿ ನಗರಕ್ಕೆ ಮರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.