ಹೊಸನಗರ: ತಾಲ್ಲೂಕಿನಬಾಣಿಗ ಗ್ರಾಮದಲ್ಲಿ ಅಕ್ರಮವಾಗಿ ಬಾವಿಯೊಂದರಲ್ಲಿ ಬಚ್ಚಿಟ್ಟಿದ್ದ ₹ 3 ಲಕ್ಷ ಮೌಲ್ಯದ 38 ಕೆ.ಜಿ ಶ್ರೀಗಂಧ ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಶಿವಮೊಗ್ಗದ ಅರಣ್ಯ ಸಂಚಾರ ದಳ ಮತ್ತು ಹೊಸನಗರ ಅರಣ್ಯ ವಲಯ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದೆ.
ಬಾಣಿಗ ವಾಸಿ ಹನೀಫ್ ಸಾಬ್ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಂಗ್ರಹಿಸಿದ್ದರು. ಯಾರಿಗೂ ಗೊತ್ತಾಗದಂತೆ ಬಾವಿಯೊಳಗೆ ಪಂಪ್ಸೆಟ್ ಇಳಿಸುವಂತೆ ಶ್ರೀಗಂಧವನ್ನು ಚೀಲದೊಳಗೆ ತುಂಬಿ ಬಾವಿಯೊಳಗೆ ಬಚ್ಚಿಟ್ಟಿದ್ದರು.
ಕಳವಿಗೆ ಸಹಕರಿಸಿದ ಆರೋಪಿಗಳಾದ ದುಮ್ಮಾ ನಿವಾಸಿ ಮಂಜುನಾಥ್, ಹೊಸಕೆಸರೆ ನಿವಾಸಿ ಹಾಲೇಶ್ ಮತ್ತು ಸಾಗರದ ಶಿವಪ್ಪನಾಯಕ ರಸ್ತೆ ನಿವಾಸಿ ಮಂಜುನಾಥ್ ಅವರನ್ನು ಬಂಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಅರಣ್ಯ ಸಂಚಾರ ದಳದ ಎಸಿಎಫ್ ಬಾಲಚಂದ್ರ, ಹೊಸನಗರ ಎಸಿಎಫ್ ಶಿವಮೂರ್ತಿ, ವಲಯ ಅರಣ್ಯಾಧಿಕಾರಿ ಕೃಷ್ಣಯ್ಯಗೌಡ, ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.