ಹೊಳೆಹೊನ್ನೂರು: ಅಕಾಲಿಕವಾಗಿ ಮೃತಪಟ್ಟ ತಮ್ಮ ಮಗನ ಸ್ಮರಣಾರ್ಥ ಶಿಕ್ಷಕರೊಬ್ಬರು, ತಾವು ಶಾಲೆಯಲ್ಲಿ ರಂಗಮಂದಿರ ನಿರ್ಮಿಸಿದ್ದಾರೆ. ಇಲ್ಲಿಗೆ ಸಮೀಪದ ಚಂದನಕೆರೆ ಶಾಲೆ ಶಿಕ್ಷಕ ಬಿ.ಜಿ.ಮಹೇಶ್ವರಪ್ಪ ಅವರು ತಮ್ಮ ಮಗ ಜಿ.ಎಂ.ಮುರಳಿ ಸ್ಮರಣಾರ್ಥ ಚಂದನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಂತ ಖರ್ಚಿನಲ್ಲಿ ರಂಗಮಂದಿರ ಕಟ್ಟಿಸಿದ್ದಾರೆ.
ಮಂಗಳವಾರ ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಬಿ. ಜಿ. ಮಹೇಶ್ವರಪ್ಪ ಅವರು, ‘2012ರಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಹೃದಯಾಘಾತದಿಂದ ಮಗನನ್ನು ಕಳೆದುಕೊಂಡಿದ್ದು ಅತೀವ ನೋವುಂಟು ಮಾಡಿತು. ಅವನ ಹೆಸರಲ್ಲಿ ಸಾರ್ವಜನಿಕ ಸೇವೆ ಮಾಡಲು ನಿರ್ಧರಿಸಿ, ರಂಗಮಂದಿರ ಕಟ್ಟಿದ್ದೇನೆ’ ಎಂದರು.
ಅಂದಾಜು ₹3 ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಲಾಗಿದೆ. ನಾವು ಮಾಡುವ ಕೆಲಸದಿಂದ ಮುಂದಿನ ಯುವ ಪೀಳಿಗೆಗೆ ಅನುಕೂಲವಾಗಲಿ. ರಂಗಮಂದಿರದಿಂದ ಒಳ್ಳೆಯ ಕಲಾವಿದರು ಮೂಡಿಬರಲಿ ಎಂದು ಅವರು ಹಾರೈಸಿದರು.
‘ಯಾವುದೇ ಗ್ರಾಮದ ಅಭಿವೃದ್ಧಿಯನ್ನು ಅಲ್ಲಿನ ಶಾಲೆಯನ್ನು ನೋಡಿ ಅಳೆಯಬೇಕು. ಯಾವ ಊರಲ್ಲಿ ಒಂದು ಉತ್ತಮ ಶಾಲೆ ಇರುತ್ತದೋ ಅಲ್ಲಿ ಸುಭಿಕ್ಷೆ ಇರುತ್ತದೆ. ಕೊಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಇನ್ನೊಬ್ಬರಿಗೆ ಕೊಟ್ಟಾಗ ಅದರ ಬೆಲೆ ಹೆಚ್ಚಾಗುತ್ತದೆ’ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿರಾಜ್ ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜಪ್ಪ ಸಿ.ಪಿ., ಇಂಜಿನಿಯರ್ ನಂದಗೋಪಾಲಗೌಡ್ರು, ಅಕ್ಷರ ದಾಸೋಹ ನಿರ್ವಾಹಣಾಧಿಕಾರಿ ಪ್ರಭಾಕರ್, ಚೈತ್ರ ಸೆಲ್ವರಾಜ್, ಹನುಮಂತಪ್ಪ ಎಸ್. ಓಂಕಾರಪ್ಪ. ರಂಗನಾಥ, ರೇಖಾ, ಭಾಗ್ಯಮ್ಮ, ಪವಿತ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.