ರಿಪ್ಪನ್ಪೇಟೆ (ಶಿವಮೊಗ್ಗ ಜಿಲ್ಲೆ): ‘ಜೈನ ಸಮುದಾಯವನ್ನು ಪ್ರವರ್ಗ 2 ‘ಬಿ’ಗೆ ಸೇರಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಬೇಕು’ ಎಂದು ಹೊಂಬುಜ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಒತ್ತಾಯಿಸಿದರು.
ಹೊಂಬುಜದ ಪಾರ್ಶ್ವನಾಥ ತೀರ್ಥಂಕರರ ಮತ್ತು ಪದ್ಮಾವತಿ ಅಮ್ಮನವರ ಸನ್ನಿಧಾನದ ಜಿನದತ್ತರಾಯ ಸಭಾಮಂಟಪ ಅರ್ಹದಾಸ ವೇದಿಕೆಯಲ್ಲಿ ಬುಧವಾರ ನಡೆದ ನಾಲ್ಕನೇ ದಿನದ ಪಂಚಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.
‘ಪಾದಯಾತ್ರೆಯ ಮೂಲಕ ಪುಣ್ಯ ಕ್ಷೇತ್ರಗಳ ದರ್ಶನ ಮಾಡುವ ಮುನಿಗಳು ತಂಗಲು ಸರ್ಕಾರಿ ಶಾಲಾ ಕೊಠಡಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಕೆಲವೆಡೆ ಅವರಿಗೆ ಜೀವ ಭದ್ರತೆ ಸಿಗುತ್ತಿಲ್ಲ. ಸರ್ಕಾರ ಅವರಿಗೆ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದರು.
‘ದೇಶದಲ್ಲಿ ಶೇ 2ರಷ್ಟು ಜನಸಂಖ್ಯೆ ಹೊಂದಿರುವ ಜೈನ ಸಮುದಾಯದ ಆಚಾರ–ವಿಚಾರ, ತತ್ವ–ಸಿದ್ಧಾಂತಗಳನ್ನು ಕಾಲಕಾಲಕ್ಕೆ ಸಮಾಜಕ್ಕೆ ಪರಿಚಯಿಸುತ್ತಿರುವ ಹೊಂಬುಜ ಮಠದ ಭಟ್ಟಾರಕರು ಸಮುದಾಯದವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.
‘ಪಾದಯಾತ್ರೆಯ ಮೂಲಕ ಪುಣ್ಯ ಕ್ಷೇತ್ರಗಳ ದರ್ಶನ ಮಾಡುವ ಮುನಿಗಳಿಗೆ ಸೂಕ್ತ ಭದ್ರತೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು,
ಆಚಾರ್ಯ ಗುಣಧರನಂದಿ ಮುನಿ ಮಹಾರಾಜರು, ಮುನಿಶ್ರೀ ಪುಣ್ಯಸಾಗರ ಮಹಾರಾಜರು, ಆಯಿರ್ಕ ನೂತನ ಮತಿ ಮಾತಾಜಿ ಇದ್ದರು.