ಶಿರಾಳಕೊಪ್ಪ: ಸಮೀಪದ ಮಂಚಿಕೊಪ್ಪ ಗ್ರಾಮದ ಬಳಿ ಶುಕ್ರವಾರ ಜಾನುವಾರುಗಳನ್ನು ಅನಧಿಕೃತವಾಗಿ ಸಾಗಿಸುತ್ತಿದ್ದ ದಾದಾಪೀರ್ ಎಂಬುವವರ ಮೇಲೆ ಯುವಕರ ತಂಡವೊಂದು ಹಲ್ಲೆ ಮಾಡಿದೆ.
ದಾದಾಪೀರ್ ಅವರು ಗೂಡ್ಸ್ ಆಟೊದಲ್ಲಿ ಶಿರಾಳಕೊಪ್ಪದಿಂದ ಚಿಕ್ಕಜಂಬೂರು ಗ್ರಾಮಕ್ಕೆ ಎರಡು ಎತ್ತುಗಳನ್ನು ಸಾಗಿಸುತ್ತಿದ್ದಾಗ ಮಾರ್ಗ ಮಧ್ಯದ ಮಂಚಿಕೊಪ್ಪದಲ್ಲಿ ಯುವಕರ ತಂಡ ವಾಹನ ತಡೆದಿದೆ. ಈ ವೇಳೆ ದಾದಾಪೀರ್ ಮೇಲೆ ಹಲ್ಲೆ ಮಾಡಿದ್ದಾಗಿ ತಿಳಿದುಬಂದಿದೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿದ 9 ಜನರ ಪೈಕಿ ಪ್ರಮೋದ್, ಶಿವು, ಸುನೀಲ್ ಅವರನ್ನು ಬಂಧಿಸಲಾಗಿದೆ. ಉಳಿದವರು ನಾಪತ್ತೆಯಾಗಿದ್ದಾರೆ.
ಸ್ವಯಂಪ್ರೇರಿತ ಪ್ರಕರಣ ದಾಖಲು: ಗೂಡ್ಸ್ ಆಟೊದಲ್ಲಿ ಸೂಕ್ತ ದಾಖಲೆ ಇಲ್ಲದೆ, ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ದಾದಾಪೀರ್ ಅವರ ವಿರುದ್ಧವೂ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.