ಶಿವಮೊಗ್ಗ: ಸರ್ಕಾರದ ವತಿಯಿಂದ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಮೇ 8 ರಂದು ಬೆಳಿಗ್ಗೆ 10.30 ಕ್ಕೆ ಭಗೀರಥ ಜಯಂತಿ ಆಚರಿಸಲಾಗುತ್ತಿದ್ದು, ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಎಸ್.ಟಿ. ಹಾಲಪ್ಪ ಮನವಿ ಮಾಡಿದರು.
ಈ ಬಾರಿ ಅದ್ಧೂರಿಯಾಗಿ ಜಯಂತಿ ಆಚರಿಸಲಾಗುತ್ತಿದೆ. 500ಕ್ಕೂ ಅಧಿಕ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ₹ 45 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜ ಜಿಲ್ಲೆಯಲ್ಲಿ 51 ಸಾವಿರ ಮತದಾರರನ್ನು ಹೊಂದಿದೆ ಎಂದು ತಿಳಿಸಿದರು.
ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ, ಭಗೀರಥ ಜಯಂತಿ ಆಚರಣೆ ಜಾರಿಗೆ ತಂದರು. ಅನೇಕ ನಿಗಮ ಮಂಡಳಿಗಳಿಗೆ ನೇಮಕ ಮಾಡಿದ್ದರು. ಈಗಿನ ಸರ್ಕಾರ ಉಪ್ಪಾರ ನಿಗಮಕ್ಕೆ ಅಧ್ಯಕ್ಷರೊಬ್ಬರನ್ನು ನೇಮಿಸಿದ್ದು, ಬಿಟ್ಟರೆ ಉಳಿದ ನೇಮಕಾತಿ ಮಾಡಿಲ್ಲ. ಉಳಿದ ನಿಗಮಗಳಲ್ಲಿಯೂ ಅವಕಾಶ ನೀಡಿಲ್ಲ. ಮುಖ್ಯಮಂತ್ರಿ ಈ ಬಗ್ಗೆ ಕ್ರಮಕೈಗೊಂಡು ಪಕ್ಷಕ್ಕಾಗಿ ದುಡಿದ ಹಿಂದುಳಿದ ಉಪ್ಪಾರ ಸಮಾಜದವರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಸತ್ಯನಾರಾಯಣ, ಪ್ರಮುಖರಾದ ನಾಗರಾಜ ಕಂಕಾರಿ, ರಾಜಶೇಖರ್, ಮೋಹನ್, ಮುರಳಿ, ರವಿಕುಮಾರ್ ಇದ್ದರು.