ಭದ್ರಾವತಿ: ‘ಬಿಜೆಪಿ ಒಂದು ತಾತ್ವಿಕ ವಿಚಾರಕ್ಕೆ ಬದ್ಧವಾಗಿ ಕೆಲಸ ಮಾಡುತ್ತಿದೆ. ರಾಜಕೀಯ ಕಾರಣಕ್ಕಾಗಿ ಅವುಗಳನ್ನು ಬದಿಗಿಡುವ ಕೆಲಸ ಎಂದಿಗೂ ಮಾಡಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.
ಶನಿವಾರಕ್ಷೇತ್ರ ಬಿಜೆಪಿ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು.
‘ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಪಂಚನಿಷ್ಠೆಗಳ ತತ್ವದಡಿ ಕೆಲಸ ಮಾಡುತ್ತಿರುವ ಬಿಜೆಪಿ ಪ್ರತಿ ಕಾರ್ಯಕರ್ತರಿಗೆ ಪ್ರಶಿಕ್ಷಣ ಮೂಲಕ ಸಂಸ್ಕಾರ ನೀಡುವ ಕೆಲಸ ಮಾಡುತ್ತಿದೆ.ರಾಷ್ಟ್ರ ಮೊದಲು ಎಂಬ ಧ್ಯೇಯ ಹೊತ್ತು ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
‘ಪ್ರಶಿಕ್ಷಣ ಎಂಬುದು ಪಕ್ಷ ಸಂಘಟನೆ ಭಾಗ. ಅದರ ಮೂಲಕ ಕಾರ್ಯಕರ್ತರ ಮನೋವಿಕಾಸ ಮಾಡುವ ಕೆಲಸ ನಡೆಯುತ್ತಿದೆ. ಈ ರೀತಿಯ ಸಂಘಟನಾ ಕೆಲಸ ಬೇರೆ ಪಕ್ಷದಲ್ಲಿಲ್ಲ’ ಎಂದರು.
‘ಜಿಲ್ಲೆಯಲ್ಲಿ ಎಲ್ಲೆಡೆ ಬಿಜೆಪಿ ಶಾಸಕರಿದ್ದಾರೆ. ಮುಂದಿನ ಬಾರಿಯೂ ನಮ್ಮ ಪಕ್ಷದ ಶಾಸಕರು ಇರುವ ರೀತಿಯಲ್ಲಿ ಪಕ್ಷ ಸಂಘಟನೆ ಮಾಡೋಣ. ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಕಾರ್ಯಕರ್ತರು ಗೆಲ್ಲುವ ರೀತಿಯಲ್ಲಿ ಸಂಕಲ್ಪ ಮಾಡೋಣ’ ಎಂದು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಧರ್ಮಪ್ರಸಾದ್, ಬಿ.ಕೆ. ಶ್ರೀನಾಥ್, ಶಿವರಾಜ್, ಪ್ರಶಿಕ್ಷಣ ಸಹ ಪ್ರಮುಖ್ ವೆಂಕ್ಯಾನಾಯ್ಕ, ಕ್ಷೇತ್ರ ಅಧ್ಯಕ್ಷ ಎಂ. ಪ್ರಭಾಕರ್ ಇದ್ದರು.