ಶಿವಮೊಗ್ಗ: ಮಾನವ ಹಕ್ಕುಗಳು ಹಾಗೂದೇಶದ ಅತಿ ದೊಡ್ಡ ಅಲ್ಪಸಂಖ್ಯಾತ ಸಮೂಹದ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳ ದಮನ ಖಂಡಿಸಿ ಉಲಮಾ-ಐ-ಶಹರ್ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
‘ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಮೌಲಾನಾ ಕಲೀಂ ಸಿದ್ದಿಕಿ ಅವರ ಬಂಧನ, ಅಸ್ಸಾಂನಲ್ಲಿ ಮಸ್ಲಿಂ ಸಮುದಾಯದ ಮನೆಗಳ ಧ್ವಂಸ, ಅಮಾಯಕ ಮುಸ್ಲಿಮರ ಹತ್ಯೆ ಮತ್ತು ಮಸೀದಿಗಳನ್ನು ಮಂದಿರಗಳನ್ನಾಗಿ ಪರಿವರ್ತಿಸುತ್ತೇವೆ ಎಂಬ ಬಿಜೆಪಿ ಮುಖಂಡರ ಹೇಳಿಕೆ ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಶಾಸನ, ಕಾನೂನು ಇದ್ದರೂ ಹತ್ಯೆಗಳು ನಿಂತಿಲ್ಲ. ಮಾನವ ಕುಲಕ್ಕೆ ನಡುಕ ಉಂಟುಮಾಡಿದೆ. ಹೊಸ ಶಿಕ್ಷಣ ನೀತಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ಸಿದ್ದಿಕಿ ಅವರ ಮೇಲೆ ಮಾಡಿರುವ ಎಲ್ಲಾ ತಪ್ಪು ಮೊಕದ್ದಮೆಗಳನ್ನು ಹಿಂಪಡೆಯಬೇಕು. ಗೌರವದಿಂದ ಬಿಡುಗಡೆಗೊಳಿಸಬೇಕುಎಂದು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ಮೌಲಾನಾ ಸೈಯದ್ ಮುಜೀಬುಲ್ಲಾ, ಮೌಲಾನಾ ಫಜಲ್ ರೆಹಮಾನ್, ಮೌಲಾನಾ ಇಮ್ರಾನ್, ಮೌಲಾನಾ ಶಫೀವುಲ್ಲಾ, ಅಬಿಬುಲ್ಲಾ, ಸಲೀಂ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.