ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೊ ಸಾಮಾಜಿಕ ಹೊಣೆಗಾರಿಕೆ ಯಾತ್ರೆ: ಸುಧೀರ್ ಮುರಳಿ

ಯಾತ್ರೆಯ ಸಮಾರೋಪದ ಸ್ಮರಣೆ: ಕೆಪಿಸಿಸಿ ವಕ್ತಾರ ಸುಧೀರ್ ಮುರಳಿ ಅಭಿಮತ
Last Updated 31 ಜನವರಿ 2023, 5:20 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಪಕ್ಷದ ಚೌಕಟ್ಟನ್ನು ಮೀರಿ ಸಾಮಾಜಿಕ ಹೊಣೆಗಾರಿಕೆಯ ಯಾತ್ರೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಸುಧೀರ್ ಮುರಳಿ ತಿಳಿಸಿದರು.

ಇಲ್ಲಿನ ಶಿವಪ್ಪನಾಯಕ ವೃತ್ತದಲ್ಲಿ ಸೋಮವಾರ ಶಿವಮೊಗ್ಗ ನಗರದ ಎನ್.ಎಸ್.ಯು.ಐ ವತಿಯಿಂದ ಆಯೋಜಿಸಿದ್ದ ಭಾರತ್ ಜೋಡೊ ಯಾತ್ರೆಯ ಸಮಾರೋಪ ಸಮಾರಂಭ ಹಾಗೂ ಮಹಾತ್ಮಗಾಂಧೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಬಿಜೆಪಿ ಎಂಟು ವರ್ಷಗಳ ಹಿಂದೆ ‘ಬಿಜೆಪಿಯೇ ಭರವಸೆ’ ಎಂಬ ಘೋಷ ವಾಕ್ಯದಡಿ ಅಧಿಕಾರಕ್ಕೆ ಬಂತು. ಅಲ್ಲಿಂದ ಇಲ್ಲಿಯವರೆಗೂ ಎಲ್ಲವನ್ನೂ ಭರವಸೆಗಳಲ್ಲೆ ಉಳಿಸಿದೆ. 2014ರಲ್ಲಿ ₹ 5ಕ್ಕೆ ಕೆ.ಜಿ ಉಪ್ಪು ಸಿಗುತ್ತಿತ್ತು. ಇಂದು ಅದು ₹ 15ಕ್ಕೆ ಏರಿಕೆಯಾಗಿದೆ. ₹ 60ಕ್ಕೆ ಸಿಗುತ್ತಿದ್ದ ಪೆಟ್ರೋಲ್ ₹ 100ರ ಗಡಿ ದಾಟಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ಅದಾನಿ - ಅಂಬಾನಿ ಅವರ ರಕ್ಷಣೆಗಿರುವ ಸರ್ಕಾರ. ಅವರ ಅನುಕೂಲಕ್ಕಾಗಿ ಸರ್ಕಾರ ನಡೆಯುತ್ತಿದೆ. ಅವರ ಕಂಪನಿಗಳಿಗಾಗಿರುವ ₹ 18000 ಕೋಟಿ ನಷ್ಟ ಭರಿಸಲು ಸಾರ್ವಜನಿಕ ಉದ್ದಿಮೆಗಳಿಗೆ ಬೀಗ ಹಾಕಲಾಗುತ್ತಿದೆ’ ಎಂದರು.

‘ಗಾಂಧಿ ಅವರನ್ನು ಕೊಂದಿದ್ದು ಗೋಡ್ಸೆ ಎಂಬ ಒಬ್ಬ ವ್ಯಕ್ತಿಯಲ್ಲ. ಅಂದು ದೇಶ ವಿಭಜನಗೆ ಕಾರಣವಾಗಿದ್ದ ಹಿಂದೂ ಮಹಾಸಭಾ 1937ರ ಸಭೆಯಲ್ಲಿ ದೇಶವಿಭಜನೆಯ ನಿರ್ಧಾರ ಕೈಗೊಂಡಿತ್ತು. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾಸಭೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಹಿಂದೂ ಮಹಾಸಭಾ ವಿರೋಧ ವ್ಯಕ್ತಪಡಿಸಿತ್ತು. ಅವರನ್ನು ಸಂವಿಧಾನ ರಚನಾ ಸಮಿತಿ ಸಭೆಯ ಅಧ್ಯಕ್ಷರನ್ನಾಗಿ ಮಾಡಿದ್ದರಿಂದ ಗೋಡ್ಸೆಯ ರೂಪದಲ್ಲಿ ಒಂದು ಸಿದ್ಧಾಂತವೇ ಗಾಂಧಿ ಅವರನ್ನು ಕೊಂದಿತ್ತು’ ಎಂದರು.

‘ಕಾಂಗ್ರೆಸ್ ಈ ಹಿಂದೆ ಎರಡು ಬಾರಿ ಶಿಕ್ಷಣ ನೀತಿಗಳ ರೂಪಿಸಿದೆ. ಮೊದಲು ರೂಪಿಸಿದ ನೀತಿಯಲ್ಲಿ ಸರ್ವರಿಗೂ ಶಿಕ್ಷಣದ ಗುರಿ ಹೊಂದಲಾಗಿತ್ತು. 1983ರಲ್ಲಿ ರೂಪಿಸಿದ ಎರಡನೇ ನೀತಿ ಜಾಗತಿಕ ಮಾರುಕಟ್ಟೆಗೆ ಅನುಕೂಲವಾಗುವಂತಹ ಶಿಕ್ಷಣ ಒದಗಿಸಿದರೆ, ಕೊರೊನಾ ಸಂದರ್ಭದಲ್ಲಿ ಯಾವುದೇ ಚರ್ಚೆ ಇಲ್ಲದೇ ಜಾರಿಗೆ ತಂದ ಎನ್‌ಇಪಿ, ಬಡವರ, ದಲಿತರ, ಅಲ್ಪಸಂಖ್ಯಾತರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ’ ಎಂದರು.

‘ಶಿವಮೊಗ್ಗ ನೆಲದಲ್ಲಿ ಸ್ವಾತಂತ್ರ್ಯ ವೀರರು ಹುಟ್ಟಿದ್ದಾರೆ. ಜಾತ್ಯತೀತ ನಿಲುವುಗಳ ನೆಲ. ಸಮಾಜವಾದಿಗಳ ತವರು. ಇಂತಹ ನೆಲದ ಕಾಲೇಜು ಕ್ಯಾಂಪಸ್‌ಗಳಲ್ಲಿ ಇಂದು ಗೋಡ್ಸೆ ವೈರಸ್ ಹರಡಲಾಗುತ್ತಿದೆ. ಇದನ್ನು ತಡೆಯಬೇಕು. ಗಾಂಧೀಜಿ ಚಿಂತನೆಗಳು ಮೊಳಗಬೇಕು. ಆ ನಿಟ್ಟಿನಲ್ಲೇ ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆ ಮೂಲಕ ಸಂದೇಶ ನೀಡಿದ್ದಾರೆ. ಯುವಕರು ಅದನ್ನು ಅನುಸರಿಸಬೇಕು’ ಎಂದರು.

‘ರಾಹುಲ್ ಗಾಂಧಿಯವರು 138 ದಿನಗಳ ಕಾಲ ದೇಶದ ಉದ್ದಗಲಕ್ಕೂ 4,084 ಕಿ.ಮೀ. ಭಾರತ್ ಜೋಡೊ ಯಾತ್ರೆ ನಡೆಸಿದ್ದಾರೆ. ಇದು ಪಕ್ಷದ ಕಾರ್ಯಕ್ರಮವಲ್ಲ. ದೇಶದ ಮನಸ್ಸುಗಳನ್ನು ಒಂದುಗೂಡಿಸುವ ಯಾತ್ರೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಬಣ್ಣಿಸಿದರು.

ರಾಜ್ಯ ಕಾಂಗ್ರೆಸ್ ವಕ್ತಾರ ಬಿ.ಎ. ರಮೇಶ್ ಹೆಗ್ಡೆ ಮಾತನಾಡಿದರು.

ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎನ್‌.ರಮೇಶ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಪಿ. ದಿನೇಶ್, ಅಡ್ಡು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ ಹಾಗೂ ದೀಪಕ್ ಸಿಂಗ್, ಅಲ್ಪಸಂಖ್ಯಾತರ ನಾಯಕರಾದ ಮೊಹಮ್ಮದ್ ನಿಹಾಲ್ , ಆರಿಫ್ , ಜಿಲ್ಲಾ ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ಎನ್ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ್, ರವಿ ಕಾಟಿಕೆರೆ, ಚರಣ್, ಹರ್ಷಿತ್, ಕೆ. ಚೇತನ್, ಸಿ.ಜಿ. ಮಧುಸೂದನ್, ಶಿವು ಮಲಗುಪ್ಪ, ಗಿರೀಶ್, ವಿಕ್ರಂ, ರವಿ
ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT