ಸಾಗರ: ಸಾಧನೆಯಲ್ಲೂ ವೈವಿಧ್ಯತೆಯನ್ನು ಹೊಂದಿರುವುದು ಸಾಗರದ ವಿಶೇಷತೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ತಾಲ್ಲೂಕು ಆಡಳಿತ ಗುರುವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಾಗರ ಒಂದು ತಾಲ್ಲೂಕು ಕೇಂದ್ರವಾದರೂ ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ರಾಷ್ಟ್ರಮಟ್ಟದಲ್ಲೂ ಉತ್ತಮ ಹೆಸರು ಮಾಡಿರುವ ಕಲಾವಿದರು ಇದ್ದಾರೆ. ಇಂತಹ ಸಾಧಕರ ಸಾಧನೆ ಯುವ ತಲೆಮಾರಿಗೆ ಸ್ಫೂರ್ತಿಯಾಗಬೇಕು ಎಂದರು.
ಅ.ರಾ.ಶ್ರೀನಿವಾಸ್ (ಪತ್ರಿಕಾ ರಂಗ), ಡಾ.ಎಚ್.ಎಸ್.ಮೋಹನ್ (ವೈದ್ಯಕೀಯ ಕ್ಷೇತ್ರ), ಎಂ.ನಾಗರಾಜ್ (ಪೌರ ಕಾರ್ಮಿಕ). ಶಾಂತಲಾ ಸುರೇಶ್ (ಶಿಕ್ಷಣ), ಸತ್ಯನಾರಾಯಣ (ಸಾಹಿತ್ಯ), ಗಗನ ಎಂ. (ಬಾಲ ಪ್ರತಿಭೆ) ಅವರನ್ನು ಸನ್ಮಾನಿಸಲಾಯಿತು.
ಮತದಾರರ ನೋಂದಣಿಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಪ್ರಶಸ್ತಿ ಪಡೆದಿರುವ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರನ್ನು ಅಭಿನಂದಿಸಲಾಯಿತು.