ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಿಗದಿಯಾಗಿದ್ದ ಚುನಾವಣೆ ಹೈಕೋರ್ಟ್ಮಧ್ಯ ಪ್ರವೇಶದ ಪರಿಣಾಮ ರದ್ದಾಗಿದೆ.
ಸಹಕಾರ ಇಲಾಖೆಯ ಜಂಟಿ ನಿರ್ದೇಶಕರು ಈಚೆಗೆ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ್ದರು.ಇದರಿಂದ ಅವರು ಸಹಜವಾಗಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದರು. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಜುಲೈ 30ರಂದು ಚುನಾವಣೆ ನಿಗದಿಯಾಗಿತ್ತು.
ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ ಆದೇಶ ಪ್ರಶ್ನಿಸಿ ಮಂಜುನಾಥ ಗೌಡರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಕೋರ್ಟ್ ಜಂಟಿ ನಿರ್ದೇಶಕರ ಆದೇಶ, ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆಗೂ ತಡೆ ನೀಡಿದೆ.
ಬಿಜೆಪಿಯ ಎಂ.ಬಿ.ಚನ್ನವೀರಪ್ಪ ಅಧ್ಯಕ್ಷ ಸ್ಥಾನ ಅಲಂಕರಿಸಲು ಸಿದ್ಧತೆ ನಡೆಸಿದ್ದರು. ಮಂಜುನಾಥ ಗೌಡರ ಬಣ ಅವರನ್ನು ಮಣಿಸಲು ಕಾರ್ಯತಂತ್ರ ನಡೆಸಿತ್ತು. ಚುನಾಚಣೆ ಪ್ರಕ್ರಿಯೆ ಮಧ್ಯೆಯೇ ಕೋರ್ಟ್ ಆದೇಶ ತಲುಪಿತು.
‘ಕೋರ್ಟ್ ಆದೇಶದ ಪ್ರತಿಯನ್ನು ಸರ್ಕಾರಿ ವಕೀಲರು ತಲುಪಿಸಿದ್ದಾರೆ. ಹಾಗಾಗಿ, ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ’ ಎಂದು ಚುನಾವಣಾಧಿಕಾರಿ ನಾಗೇಂದ್ರ ಬಿ.ಹೊನ್ನಳ್ಳಿ ಪ್ರತಿಕ್ರಿಯಿಸಿದರು.
ಬ್ಯಾಂಕ್ನ ಗಾಂಧಿ ಬಜಾರ್ ಶಾಖೆಯಲ್ಲಿ 2014ರಲ್ಲಿ ನಡೆದಿದ್ದ ₨ 62.77 ಕೋಟಿ ಮೊತ್ತದ ಬಂಗಾರ ಅಡಮಾನ ಸಾಲ ಹಗರಣದ ಸಂಬಂಧ ತನಿಖೆಗೆ ಸಹಕಾರಿಸಲು ಮಂಜುನಾಥ ಗೌಡರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಈ ಹಿಂದೆ ಸಿಐಡಿ ಹಗರಣದ ತನಿಖೆ ನಡೆಸಿತ್ತು. ‘ಹಣಕಾಸಿನ ವ್ಯವಹಾರ ಅಧಿಕಾರಿಗಳ ಜವಾಬ್ದಾರಿ. ಆಡಳಿತ ಮಂಡಳಿ ಇದಕ್ಕೆ ಹೊಣೆಯಲ್ಲ. ಅಂದು ಅಧ್ಯಕ್ಷರಾಗಿದ್ದ ಗೌಡರ ಪಾತ್ರ ಇಲ್ಲ’ ಎಂದುಅವರನ್ನುಆರೋಪ ಮುಕ್ತಗೊಳಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಗರಣಕ್ಕೆ ಮತ್ತೆ ಮರುಜೀವ ನೀಡಿತ್ತು.
ಮಂಜುನಾಥ ಗೌಡರು ನಿರ್ದೇಶಕ ಸ್ಥಾನದಿಂದ ವಜಾಗೊಳ್ಳುತ್ತಿದ್ದಂತೆ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ರಾಜಣ್ಣ ರೆಡ್ಡಿ ಅವರನ್ನು ತೆಗೆದು ಹಾಕಿ ಸಹಕಾರ ಇಲಾಖೆಯ ನಾಗೇಶ್ ಡೋಂಗ್ರೆ ಅವರನ್ನು ನೇಮಿಸಲಾಗಿತ್ತು.ಈ ನೇಮಕಕ್ಕೂ ಕೋರ್ಟ್ ತಡೆ ನೀಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.