ಶಿಕಾರಿಪುರ: ಒಂದು ಸಂಸ್ಥೆ ಸಧೃಢವಾಗಿ ಬೆಳೆಯಲು ಸಿಬ್ಬಂದಿ ಶ್ರಮ ಹಾಗೂ ಪ್ರಾಮಾಣಿಕ ಸೇವೆ ಅತ್ಯಮೂಲ್ಯ ಎಂದು
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಪಟ್ಟಣಕ್ಕೆ ಸಮೀಪದಲ್ಲಿ ಭಾನುವಾರ ಶಾಹಿ ಎಕ್ಸ್ಪೋರ್ಟ್ (ಗಾರ್ಮೆಂಟ್ಸ್) ನೂತನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಭಾಗದಲ್ಲಿ ಗಾರ್ಮೆಂಟ್ಸ್ ಆರಂಭವಾಗಿದ್ದರಿಂದ ಹಲವರಿಗೆ ಉದ್ಯೋಗಾವಕಾಶ ದೊರಕಿದೆ. ಸಂಸ್ಥೆಯು 6ಸಾವಿರ ಜನರಿಗೆ
ಉದ್ಯೋಗ ನೀಡುವ ಗುರಿ ಹೊಂದಿದೆ. ರಾಜ್ಯದಲ್ಲಿ ಶೇ 80ರಷ್ಟು ಮಹಿಳೆಯರಿಗೆ ಈ ಸಂಸ್ಥೆಯಲ್ಲಿ ಉದ್ಯೋಗ
ನಿರ್ವಹಿಸಲು ಅವಕಾಶ ನೀಡಿದೆ. ಗಾರ್ಮೆಂಟ್ಸ್ ಆರಂಭವಾಗುವ ಮುಂಚೆ ನಿಮ್ಮ ಕುಟುಂಬದ ಪರಿಸ್ಥಿತಿ ಹೇಗಿತ್ತು ? ಈಗ ಹೇಗಿದೆ ಎಂಬುದನ್ನು ಯೋಚಿಸಬೇಕು. ನಿಮ್ಮ ತಂದೆ ತಾಯಿಗಳನ್ನು ನೆಮ್ಮದಿಯಿಂದ ನೋಡಿಕೊಂಡಾಗ ನಿಮ್ಮ ಜೀವನ ಸಾರ್ಥಕವಾಗುತ್ತದೆ’ ಎಂದು ಕಿವಿಮಾತು ಹೇಳಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಉದ್ಯೋಗ ದೊರೆಯುವುದು ಕಷ್ಟವಾಗಿದೆ. ಆದ್ದರಿಂದ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಅಗತ್ಯತೆ ಇದೆ. ತಾಲ್ಲೂಕಿನಲ್ಲಿ ಶಾಹಿ ಕಂಪನಿ ಪ್ರಸ್ತುತ 2 ಸಾವಿರ ಉದ್ಯೋಗಗಳನ್ನು ನೀಡಿದೆ. ಶಿವಮೊಗ್ಗ, ಸಾಗರ, ಶಿಕಾರಿಪುರ ಸೇರಿ ಜಿಲ್ಲೆಯಲ್ಲಿ 20 ಸಾವಿರ ಜನರಿಗೆ ಉದ್ಯೋಗ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
‘ಮಹಾರಾಷ್ಟ್ರದ ಪುಣೆಯಲ್ಲಿ ಆರಂಭವಾಗಬೇಕಿದ್ದ ಈ ಗಾರ್ಮೆಂಟ್ಸ್ ಶಿಕಾರಿಪುರದಲ್ಲಿ ಆರಂಭವಾಗಲು ಯಡಿಯೂರಪ್ಪ ಅವರು ಕಾರಣರಾಗಿದ್ದಾರೆ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಈ ಸಂಸ್ಥೆ ಅವಕಾಶ ನೀಡಿದೆ. ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರನ್ನು ಆಶೀರ್ವದಿಸಿದಂತೆ ನನ್ನನ್ನೂ ಆಶೀರ್ವದಿಸಬೇಕು’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮನವಿ ಮಾಡಿದರು.
ಶಾಹಿ ಎಕ್ಸ್ಪೋರ್ಟ್ ಸಂಸ್ಥೆಯ ಅಧ್ಯಕ್ಷ ಆನಂದ್ ಪದ್ಮನಾಬ್, ಸಿಒಒ ಅನ್ಬೂ, ಸಿಬ್ಬಂದಿಯಾದ ಚಿತ್ರಶೇಖರ್, ಆನಂದ್, ಜೀವಿತ್, ದಿನೇಶ್
ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.