ಕಾರ್ಗಲ್: ಶರಾವತಿ ಕಣಿವೆ ಪ್ರದೇಶದಲ್ಲಿ ಮುಂಗಾರು ಮಳೆಯ ಅಬ್ಬರಕ್ಕೆ ವಿಶ್ವ ವಿಖ್ಯಾತ ಜೋಗ ಜಲಪಾತದ ಧಾರೆ ಹೆಚ್ಚಾಗಿದ್ದು, ಪ್ರಕೃತಿ ದತ್ತವಾದ ನೈಜ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡು ಜೋಗಕ್ಕೆ ಲಗ್ಗೆಯಿಡುತ್ತಿದೆ.
ಜಲಪಾತ ಪ್ರದೇಶದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅನನುಕೂಲತೆಗಳ ನಡುವೆಯೂ ಜಲಸಿರಿಯ ವೈಭವ ವೀಕ್ಷಣೆಗೆ ಜನ ಸಾಗರ ಹೆಚ್ಚುತ್ತಿದೆ. ವಾರಾಂತ್ಯದ ರಜೆಯ ಕಾರಣ, ಸುರಿಯುವ ಮಳೆಯ ನಡುವೆಯೇ ಭಾನುವಾರ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಬಂದಿದ್ದರು.
ಜಲಪಾತ ಪ್ರದೇಶದಲ್ಲಿ ಕುರುಕಲು ತಿಂಡಿ ವ್ಯಾಪಾರಿಗಳು, ಸ್ಥಳೀಯ ಛಾಯಾಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಉತ್ತಮ ಆದಾಯದ ನಿರೀಕ್ಷೆಯಿದೆ ಎಂದು ಛಾಯಾಗ್ರಾಹಕ ನಾಗರಾಜ್ ಕಾರ್ಗಲ್ ಅವರು ತಿಳಿಸಿದರು.