ಭದ್ರಾವತಿ: ‘ಕನ್ನಡ ಕಟ್ಟುವ ಕೆಲಸ ಮಾಡುವ ಮೂಲಕ ಹಲವು ದಶಕಗಳ ಕಾಲ ಸಾಹಿತ್ಯ ಸೇವೆ ಮಾಡಿರುವ ಎ.ಪಿ. ಕುಮಾರ್ ಅವರನ್ನು 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕನ್ನಡ ನಿಷ್ಠನಿಗೆ ಸಂದ ಗೌರವ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಕರಪ್ಪ ಹೇಳಿದರು.
ಶುಕ್ರವಾರ ಅವರನ್ನು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಸನ್ಮಾನಿಸಿ, ಸಮ್ಮೇಳನಕ್ಕೆ ಆಹ್ವಾನ ನೀಡಿ ಮಾತನಾಡಿದರು.
‘ಸಮ್ಮೇಳನಾಧ್ಯಕ್ಷರು ಎಂದರೆ ಕೇವಲ ಸಾಹಿತಿಗಳು, ಲೇಖಕರಿಗೆ ಸೀಮಿತವಲ್ಲ. ಬದಲಾಗಿ ಕನ್ನಡ ಕಟ್ಟುವ ಜತೆಗೆ ಕನ್ನಡ ಮನಸ್ಸುಗಳನ್ನು ಸೆಳೆದು ವೇದಿಕೆ ಕಲ್ಪಿಸುವ ಸಂಘಟನಾ ಚತುರರಿಗೂ ಈ ರೀತಿಯ ಅವಕಾಶ ಸಿಕ್ಕಿರುವುದಕ್ಕೆ ತಾಲ್ಲೂಕು ಸಮಿತಿಯನ್ನು ಅಭಿನಂದಿಸುತ್ತೇನೆ’
ಎಂದರು.
‘ತಾಲ್ಲೂಕಿನಲ್ಲಿ ಕನ್ನಡಕ್ಕಾಗಿ ಜೋಳಿಗೆ ಹಿಡಿದು ಓಡಾಡಿ ಸಾಹಿತ್ಯ ಪರಿಷತ್ತು ಕಟ್ಟುವ ಮೂಲಕ ಮೂರು ಅವಧಿಗೆ ಅಧ್ಯಕ್ಷರಾಗಿ ಕೆಲಸ ಮಾಡಿರುವ ಅವರ ಕೆಲಸ ಶ್ಲಾಘನೀಯ’ ಎಂದು
ಅವರು ಹೇಳಿದರು.
ಸಮ್ಮೇಳನಾಧ್ಯಕ್ಷ ಎ.ಪಿ. ಕುಮಾರ್, ‘ಸಾಹಿತಿ ಅಲ್ಲದಿದ್ದರೂ ಗುರುತಿಸಿ ಪರಿಷತ್ತಿನ ಸಮ್ಮೇಳನಾಧ್ಯಕ್ಷ ಗೌರವ ಸ್ಥಾನ ನೀಡಿರುವುದು ಬದುಕಿನ ಪುಣ್ಯ. ಕೇವಲ ಎರಡಂಕಿ ಸದಸ್ಯರಿದ್ದ ಅವಧಿಯಲ್ಲಿ ಕಸಾಪ ಕೆಲಸ ಆರಂಭಿಸಿ 11 ವರ್ಷಗಳ ಕಾಲ ಅಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ನೀಡಿದ್ದು ಸ್ಮರಣೀಯ’
ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪೇಕ್ಷ ಮಂಜುನಾಥ, ‘ಜ.23ರಂದು ಬಸವೇಶ್ವರ ಸಭಾ ಭವನದಲ್ಲಿ ನಡೆಯುವ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಕಸಾಪ ಉಪಾಧ್ಯಕ್ಷ ಎಚ್.ಎನ್. ಮಹಾರುದ್ರ, ಹಿರಿಯ ಸದಸ್ಯ ಎನ್.ಬಾಬು, ದಿಗಂಬರ ಜೈನ್ ಸಮಾಜದ ಅಧ್ಯಕ್ಷ ಪಿ.ಸಿ.ಜೈನ್, ಪದ್ಮಾವತಿ, ಅಭಯಕುಮಾರ್, ಕುಬೇರಪ್ಪ, ಸಿದ್ದಲಿಂಗಯ್ಯ, ನಾಗರತ್ನಮ್ಮ, ಡಾ. ನಾಸೀರ್ ಖಾನ್, ಚಂದ್ರಶೇಖರ ಚಕ್ರಸಾಲಿ, ವೈ.ಕೆ. ಹನುಮಂತಯ್ಯ, ಅಣ್ಣಪ್ಪ, ರಾಮಾಚಾರ್, ಬಾಲಾಜಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.