ಸಾಗರ: ಇಂದ್ರಿಯಗಳ ಕ್ಷಣಿಕ ಭೋಗದ ಸುಖಕ್ಕೆ ಬದುಕು ಸೀಮಿತವಾಗಬಾರದು ಎಂದು ಸೋಂದಾ ಜೈನ ಮಠದ ಭಟ್ಟಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಚೆನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಗೆಕೆರೆ ಪಾರ್ಶ್ವನಾಥ ಬಸದಿಯಲ್ಲಿ ಪಾರ್ಶ್ವನಾಥ ದಿಗಂಬರ ಜೈನ್ ಸೇವಾ ಟ್ರಸ್ಟ್, ಜೈನ್ ಮಿಲನ್, ಸ್ವಸ್ತಿಶ್ರೀ ಮಹಿಳಾ ಸಮಾಜ ಶುಕ್ರವಾರ ಏರ್ಪಡಿಸಿದ್ದ ಕಲಿಕುಂಡ ಆರಾಧನೆ ಹಾಗೂ ಸಾಮೂಹಿಕ ವೃತೋಪದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮೋಕ್ಷ ಕಲ್ಯಾಣದಂತಹ ಶಾಶ್ವತ ಸುಖದತ್ತ ಹೆಜ್ಜೆ ಹಾಕಿದಾಗ ಬದುಕು ಸಾರ್ಥಕಗೊಳ್ಳುತ್ತದೆ. ಭಕ್ತಿ ಮತ್ತು ಶ್ರದ್ಧೆಯಿಂದ ಧರ್ಮಾಚರಣೆ ಮಾರ್ಗದಲ್ಲಿ ನಡೆದಾಗ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ. ಸ್ವಕಲ್ಯಾಣದ ಜೊತೆಗೆ ಪರರ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂಬ ಭಾವನೆ ಧರ್ಮ ಮಾರ್ಗದಲ್ಲಿ ನಡೆದಾಗ ಸಹಜವಾಗಿ ಮೂಡುತ್ತದೆ ಎಂದರು.