ಬೆಂಗಳೂರು: ಮಂಗನ ಕಾಯಿಲೆ ಹರಡುವುದನ್ನು ತಡೆಯಲು ಮೆಲಾಥಿಯನ್ ಪುಡಿ ಬಳಕೆ ಮಾಡುವುದರಿಂದ ಆಗಲಿರುವ ತೊಂದರೆಗಳ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ದೂರು ನೀಡಲು ಅರ್ಜಿದಾರರಿಗೆ ಹೈಕೋರ್ಟ್ ಅನುಮತಿ ನೀಡಿದೆ.
ಶಿವಮೊಗ್ಗದ ವಕೀಲ ಕೆ.ಪಿ. ಶ್ರೀಪಾಲ್ ಮತ್ತು ಎನ್.ಜಿ. ರಾಮೇಶಪ್ಪ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಅರ್ಜಿಯನ್ನು ವಿಲೇವಾರಿ ಮಾಡಿತು.
‘ಮಂಗಗಳು ಸತ್ತಾಗ ಅದರ ಸುತ್ತಲೂ ಮೆಲಾಥಿಯನ್ ಪುಡಿ ಸುರಿಯಲಾಗುತ್ತಿದೆ. ಇದರಿಂದ ಇತರ ಪ್ರಾಣಿಗಳ ಆವಾಸಕ್ಕೆ ಹಾನಿಯಾಗುತ್ತಿದೆ’ ಎಂದು ಅರ್ಜಿದಾರರು ದೂರಿದ್ದರು.
‘2018ರ ಡಿಸೆಂಬರ್ನಿಂದ ಈಚೆಗೆ ಮಂಗನ ಕಾಯಿಲೆ ಪ್ರಕರಣಗಳು ಕಡಿಮೆಯಾಗುತ್ತಿವೆ’ ಎಂದು ಶಿವಮೊಗ್ಗದ ಸೋಂಕು ಪತ್ತೆ ಪ್ರಯೋಗಾಲಯದ ನಿರ್ದೇಶಕರು ಸಲ್ಲಿಸಿದ್ದ ಅಫಿಡವಿಟ್ ಅನ್ನು ಪೀಠ ಪರಿಶೀಲನೆ ನಡೆಸಿತು.