ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಬಿ.ಚನ್ನವೀರಪ್ಪ ಅವರು ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ದಶಕಗಳ ಸಮಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಆರ್.ಎಂ.ಮಂಜುನಾಥ ಗೌಡ ಅವರನ್ನು ಸಹಕಾರ ಇಲಾಖೆ ಈಚೆಗೆ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿತ್ತು. ಹಾಗಾಗಿ, ಉಪಾಧ್ಯಕ್ಷರಾದ ಚನ್ನವೀರಪ್ಪ ಅವರು ಪ್ರಭಾರ ವಹಿಸಿಕೊಂಡಿದ್ದಾರೆ.
ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ಎಸ್.ಡೋಂಗ್ರೆ ಸರ್ಕಾರದ ಆದೇಶದಂತೆ ಅಧಿಕಾರ ಹಸ್ತಾಂತರಿಸಿದರು.
ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶೀಘ್ರ ನಡೆಯಲಿದ್ದು, ಡಾ.ನಾಗೇಂದ್ರ ಎಚ್.ಹೊನ್ನಳ್ಳಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. 16 ನಿರ್ದೇಶಕರು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.
‘ಮಂಜುನಾಥ ಗೌಡರ ಸ್ಥಾನ ತೆರವಾದ ಕಾರಣ ಪ್ರಭಾರ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿರುವೆ. ರೈತರಿಗೆ ಸಾಲ ನೀಡಲು ಮೊದಲ ಆಧ್ಯತೆ ನೀಡುವೆ. ಸಹಕಾರಿ ಸಂಘಗಳ ಅಭಿವೃದ್ಧಿಗೆ ಶ್ರಮಿಸುವೆ’ ಎಂದು ಚನ್ನವೀರಪ್ಪ ಪ್ರತಿಕ್ರಿಯಿಸಿದರು.