ಭದ್ರಾವತಿ: ‘ಸಿನಿಮಾದವರು ಮುಖಕ್ಕೆ ಬಣ್ಣಹಚ್ಚಿಕೊಂಡರೆ, ಈಶ್ವರಪ್ಪ ನಾಲಿಗೆಗೆ ಬಣ್ಣಹಚ್ಚಿಕೊಂಡು ಮಾತನಾಡುತ್ತಾರೆ. ಈಶ್ವರಪ್ಪ ನಾಲಾಯಕ್. ಅವರ ಹೇಳಿಕೆಗಳಿಗೆ ಉತ್ತರಿಸುವುದೇ ವ್ಯರ್ಥ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿನ ಶನಿವಾರ ಚುನಾವಣೆ ಸಭೆ ನಡೆಸಿ ಮಾತನಾಡಿ, ಜನರಿಗೆ ಬಿಜೆಪಿ ನಾಟಕದ ಅರಿವಾಗಿದೆ. ಜನರು ಈ ಬಾರಿ ಬದಲಾವಣೆ ಬಯಸಿರುವುದೇ ಕಾಂಗ್ರೆಸ್ಗೆ ಶಕ್ತಿ. ಬಿಜೆಪಿಯಿಂದ ಮೋಸ ಹೋಗಿದ್ದೇವೆ ಎಂದು ಮತದಾರರಿಗೆ ತಿಳಿದಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಗೆಲುವು ಸುಲಭವಾಗಲಿದೆ ಎಂದರು.
ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಭದ್ರಾವತಿಯ ಜನತೆ ಗೀತಾ ಶಿವರಾಜಕುಮಾರ್ ಗೆಲುವಿಗಾಗಿ ಹೆಚ್ಚಿನ ಮತ ನೀಡಬೇಕು ಎಂದು ಮನವಿ ಮಾಡಿದರು.
ಶಿರಸಿ ಶಾಸಕ ಭೀಮಣ್ಣ, ಕಾಂಗ್ರೆಸ್ ಮುಖಂಡರಾದ ಪ್ರಸನ್ನಕುಮಾರ್, ಕಲಗೋಡು ರತ್ನಾಕರ, ಬಿ.ಕೆ.ಮೋಹನ್, ಬಲ್ಕೀಶ್ ಬಾನು, ರೇಣುಕಮ್ಮ, ಎಸ್.ಕುಮಾರ್, ಎಚ್.ಎಸ್. ಷಡಾಕ್ಷರಿ, ಚೆನ್ನಪ್ಪ, ಮಣಿ, ಕಾಂತರಾಜ್, ಮಣಿಶೇಖರ್, ಬಷೀರ್, ಸಿ.ಜಯಪ್ಪ, ಸುದೀಪ್ ಕುಮಾರ್, ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.