ಶಿವಮೊಗ್ಗ: ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಮೇಲಿರುವ ಆಗುಂಬೆ ಠಾಣಾ ವ್ಯಾಪ್ತಿಯ ಪ್ರಕರಣಗಳ ವಿಚಾರಣೆಯನ್ನು ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಫೆ. 29ಕ್ಕೆ ನಿಗದಿಪಡಿಸಿದೆ.
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2009ರಲ್ಲಿ ಕೆಎಸ್ಆರ್ಟಿಸಿ ಬಸ್ ಸುಟ್ಟು ಹಾಕಿದ್ದ ಪ್ರಕರಣ, ಅರಣ್ಯ ಇಲಾಖೆ ಗೇಟ್ ಸ್ಫೋಟಿಸಿದ್ದ ಹಾಗೂ ಅರುಣ್ಕುಮಾರ್ ಅವರ ಮನೆಯಲ್ಲಿ ದರೋಡೆ ಪ್ರಕರಣದ ಕುರಿತಂತೆ ಶಿವಮೊಗ್ಗ ನ್ಯಾಯಾಲಯದಲ್ಲಿ ಎರಡು ದಿನಗಳ ಕಾಲ ವಿಚಾರಣೆ ನಡೆಯಿತು.
ಕೇರಳದಿಂದ ಬಾಡಿವಾರೆಂಟ್ ಮೇಲೆ ಶಿವಮೊಗ್ಗ ನ್ಯಾಯಾಲಯಕ್ಕೆ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಕರೆತಂದು ಹಾಜರುಪಡಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಅವರನ್ನು ಮತ್ತೆ ಕೇರಳದ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಅವರ ಪರ ವಕೀಲ ಕೆ.ಪಿ. ಶ್ರೀಪಾಲ್ ಮಾಹಿತಿ ನೀಡಿದರು.