ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ನಲ್ಲಿ ನಡೆಯುವ 31ನೇ ಘಟಿಕೋತ್ಸವದಲ್ಲಿ ಭಾಗವಹಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮ್ಮತಿಸಿದ್ದಾರೆ.
ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ನೇತೃತ್ವದ ವಿಶ್ವವಿದ್ಯಾಲಯದ ನಿಯೋಗ ಗುರುವಾರ ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ಘಟಿಕೋತ್ಸವಕ್ಕೆ ಆಹ್ವಾನ ನೀಡಿತು. ಅಕ್ಟೋಬರ್ ಕೊನೆಯ ವಾರ ಘಟಿಕೋತ್ಸವ ನಿಗದಿಯಾಗಲಿದೆ.
ಕೋವಿಡ್ ನಿಯಮಗಳು ಸಡಿಲಗೊಂಡಿವೆ. ಹಾಗಾಗಿ, ಈ ಬಾರಿ ಆಯ್ದ ಪ್ರಮುಖರ ಸಮ್ಮುಖದಲ್ಲಿ ಈ ಬಾರಿಯ ಘಟಿಕೋತ್ಸವ ನಡೆಯಲಿದೆ. ಹಣಕಾಸು ಸಚಿವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಿರುವುದು ಸಂತಸದ ವಿಷಯ ಎಂದು ಕುಲಪತಿ ವೀರಭದ್ರಪ್ಪ ಹರ್ಷ ವ್ಯಕ್ತಪಡಿಸಿದರು.
ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಂ.ತ್ಯಾಗರಾಜ, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಎಸ್.ಎನ್.ಯೋಗೀಶ್, ಕುವೆಂಪು ವಿಶ್ವವಿದ್ಯಾಲಯದ ದೆಹಲಿ ಪ್ರತಿನಿಧಿ ರಾಜಶೇಖರ್ ಸವಣೂರು ಉಪಸ್ಥಿತರಿದ್ದರು.