ಶಿವಮೊಗ್ಗ: ತುಂಗಭದ್ರಾ ಸಕ್ಕರೆ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಪರಭಾರೆ ಮಾಡಬಾರದು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಒತ್ತಾಯಿಸಿದರು.
‘ತುಂಗಭದ್ರಾ ಸಕ್ಕರೆ ಕಾರ್ಖಾನೆ ಜಿಲ್ಲೆಯ ಜೀವನಾಡಿಯಾಗಿತ್ತು. ಕಾರ್ಖಾನೆ ನಿಂತುಹೋದ ಮೇಲೆ ಸರ್ಕಾರವೇ ಸ್ವಾಧೀನಪಡಿಸಿಕೊಳ್ಳಲು ರಾಷ್ಟ್ರಪತಿಯಿಂದ ಆದೇಶವಾಗಿತ್ತು. ಆದರೆ, ಮದ್ರಾಸ್ ಹೈಕೋರ್ಟ್ಗೆ ಇದನ್ನು ನಡೆಸಲು ಸಾಧ್ಯವಿಲ್ಲ ಎಂದು ಸರ್ಕಾರ ಪತ್ರ ಬರೆದು ಕೈತೊಳೆದುಕೊಂಡಿತ್ತು. ಕಾರ್ಮಿಕರಿಗೆ ಮತ್ತು ರೈತರಿಗೆ ಬರಬೇಕಾದ ಹಣವೇ ಇನ್ನೂ ಬಂದಿಲ್ಲ. ಈಗ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿದೂರಿದರು.
ಮಜ್ದೂರ್ ಸಂಘದ ಕಾರ್ಮಿಕ ಮುಖಂಡ ರಾಘವನ್ ಮಾತನಾಡಿ, ‘ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಈ ಕಾರ್ಖಾನೆಯನ್ನು ಮಾರಾಟ ಮಾಡಲಾಗುತ್ತಿದೆ. ತುಂಗಭದ್ರಾಶುಗರ್ ವರ್ಕ್ನ ಎಂಡಿಯಾಗಿದ್ದ ಮಣಿವೇಲನ್ ಅವರು ಕಾನೂನುಬಾಹಿರವಾಗಿ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನು ಮಾರಾಟ ಮಾಡುವ ಹಕ್ಕು ಅವರಿಗಿಲ್ಲ’ ಎಂದು ಅವರುಹೇಳಿದರು.
ತುಂಗಭದ್ರಾ ಶುಗರ್ ಕಂಪನಿಯಾಗಲಿ, ದೇವಿ ಶುಗರ್ ಕಂಪನಿ ಎಂಬ ಹೆಸರಿನವರಾಗಲಿ ಯಾರೂ ಆಸ್ತಿಯನ್ನು ಯಾರಿಗೂ ಪರಭಾರೆ ಮಾಡದಂತೆ ಉಪ ನೋಂದಣಿ ಅಧಿಕಾರಿಗಳಿಗೆ ಮನವಿಮಾಡಲಾಗಿದೆ. ಒಂದು ಪಕ್ಷ ಆಸ್ತಿ ಪರಭಾರೆ ಮಾಡಿದ್ದರೆ ಅದರ ನೋಂದಣಿಯನ್ನು ರದ್ದು ಮಾಡಬೇಕು ಎಂದುಅಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪ್ರಮುಖರಾದ ಡಾ. ಬಿ.ಎಂ. ಚಿಕ್ಕಸ್ವಾಮಿ, ಇ.ಬಿ. ಜಗದೀಶ್,ಡಿ.ಎಸ್. ಜಯಣ್ಣ, ಕಾರ್ಮಿಕ ಮುಖಂಡರಾದ ಕೆ. ಚಂದ್ರು, ದೇವೇಂದ್ರಪ್ಪ, ನೀತಿಗೆರೆ ಮಹೇಶ್ ಇದ್ದರು.