ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕರಣೆ ನೆಪದಲ್ಲಿ ಸಾಂಸ್ಕೃತಿಕ ದಬ್ಬಾಳಿಕೆ: ಪ್ರೊ.ರಾಜೇಂದ್ರ ಚೆನ್ನಿ ಆಕ್ರೋಶ

ಪಠ್ಯಕ್ರಮ ಸಿದ್ಧಾಂತಗಳ ಪರ ಅಸ್ತ್ರವಲ್ಲ
Last Updated 3 ಜೂನ್ 2022, 5:01 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಪಠ್ಯಪುಸ್ತಕಗಳು ಯಾವುದೇ ಸಿದ್ಧಾಂತಗಳ ಪರ ಅಸ್ತ್ರವಲ್ಲ. ಆದರೂ ಪಠ್ಯಕ್ರಮ ಪರಿಷ್ಕರಣೆ ನೆಪದಲ್ಲಿ ನಾಡಿನ ಸಾಂಸ್ಕೃತಿಕ ಪರಿಸ್ಥಿತಿಯ ಮೇಲೆ ಬಿಜೆಪಿ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ಪಠ್ಯಗಳು ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣ ಮಾಡಬಾರದು. ಆದರೆ, ಈಗ ಸರ್ಕಾರ ಹೊಸ ಶಿಕ್ಷಣ ನೀತಿಯ ನೆಪವೊಡ್ಡಿ ಪಠ್ಯಗಳನ್ನು ತಿದ್ದಿ ಮಕ್ಕಳಲ್ಲಿ ತಪ್ಪು ಗ್ರಹಿಕೆ ಮೂಡಿಸಿ ಯಾವುದೋ ಒಂದು ಸಿದ್ಧಾಂತ ಹೇರಲು ಹೊರಟಿದೆ’ ಎಂದು ಹೇಳಿದರು.

ಪಠ್ಯ ಪುಸ್ತಕಗಳು ಶಾಂತಿ ಕಾಪಾಡಬೇಕು. ಈ ನಾಡಿನ ಇತಿಹಾಸ, ಧರ್ಮ, ಸಾಂಸ್ಕೃತಿಕತೆಯ ಬಗ್ಗೆ ತಿಳಿವಳಿಕೆ ಮೂಡಿಸಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ನೆರವಾಗಬೇಕು. ಆದರೆ, ಇಂದಿನ ಪಠ್ಯ ಪರಿಷ್ಕರಣಾ ಸಮಿತಿ ಜಾತಿಗಳು, ಧರ್ಮಗಳ ನಡುವೆ ಗೋಡೆ ಕಟ್ಟುವ ಕೆಲಸ ಮಾಡುತ್ತಿದೆ. ಅನೇಕ ಮಹನೀಯರ ಕವಿಗಳ ಪಠ್ಯವನ್ನು ಕೈಬಿಡುವುದರ ಜೊತೆಗೆ ಬೇಡವಾದುದನ್ನು ಸೇರಿಸಲು ಹೊರಟಿದೆ. ಶಿಕ್ಷಣ ಸಚಿವರು ಇದಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಕೂಡಲೇ ಅವರು ರಾಜೀನಾಮೆ ನೀಡ ಬೇಕು. ರಾಜ್ಯದಾದ್ಯಂತ ಪ್ರತಿರೋಧಗಳು ನಡೆಯುತ್ತಿದ್ದರೂ ತಮಗೇನೂ ಗೊತ್ತಿಲ್ಲ ಎಂಬಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನಕ್ಕೆ ಶರಣಾಗಿದ್ದಾರೆ ಎಂದರು.

‘ಯಾವುದೇ ಕಾರಣಕ್ಕೂ ಹೊಸ ಪಠ್ಯವನ್ನು ನಾವು ಒಪ್ಪುವುದಿಲ್ಲ. ಪರಿಷ್ಕರಣೆ ಪಾರದರ್ಶಕವಾಗಿಲ್ಲ. ಲಂಕೇಶ್ ಅವರ ಲೇಖನ ತೆಗೆದು ಚಕ್ರವರ್ತಿ ಸೂಲಿಬೆಲೆ ಅವರ ಲೇಖನ ಹಾಕಲಾಗಿದೆ. ಇದೊಂದು ಸಾಂಸ್ಕೃತಿಕ ದಬ್ಬಾಳಿಕೆ. ಕನ್ನಡದ ಜನರು ಸುಮ್ಮನಿರುವುದಿಲ್ಲ. ನಾಳೆಯಿಂದಲೇ ಹೋರಾಟ ತೀವ್ರಗೊಳ್ಳುತ್ತದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ‘ಪಠ್ಯ ಪರಿಷ್ಕರಣೆ ಎಂಬ ಈ ದಬ್ಬಾಳಿಕೆಯನ್ನು ನಾವು ಸಹಿಸುವುದಿಲ್ಲ. ಇದನ್ನು ಶಿವಮೊಗ್ಗದ ಎಲ್ಲ ಸಂಘಟನೆಗಳು ಪ್ರಗತಿಪರರು ಖಂಡಿಸಿದ್ದಾರೆ’ ಎಂದು ಹೇಳಿದರು.

ರೈತ ಮುಖಂಡ ಎಚ್.ಆರ್.ಬಸವರಾಜಪ್ಪ ಮಾತನಾಡಿ, ‘9ನೇ ತರಗತಿಯ ಸಮಾಜ ಶಾಸ್ತ್ರದಲ್ಲಿ ಬಸವೇಶ್ವರರ ಬಗ್ಗೆ ತಿರುಚಿ ಬರೆಯಲಾಗಿದೆ. ಬಸವಣ್ಣನವರು ಉಪನಯನ ಮಾಡಿಸಿಕೊಂಡರು. ಅವರಿಗೆ ಶೈವ ಗುರುಗಳು ದೀಕ್ಷೆ ಕೊಟ್ಟರು ಎಂದು ತಪ್ಪು ಮಾಹಿತಿ ನೀಡಲಾಗಿದೆ. ಇದರ ವಿರುದ್ಧ ಈಗಾಗಲೇ ಲಿಂಗಾಯತ ಮಠಗಳು ತಿರುಗಿ ಬಿದ್ದಿವೆ’ ಎಂದರು.

ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ‘ಕನ್ನಡದ ಶಿಖರಪ್ರಜ್ಞೆಯಾಗಿರುವ ಕುವೆಂಪು ಅವರಿಗೆ ರೋಹಿತ್ ಚಕ್ರತೀರ್ಥ ಅಗೌರವ ತೋರಿಸಿದ್ದಾರೆ. ನಾಡಗೀತೆ ತಿರುಚುವ ಮೂಲಕ ಕುವೆಂಪು ಅವರಿಗೆ, ಕನ್ನಡನಾಡಿಗೆ ಅಗೌರವ ತೋರಿದ್ದಾರೆ. ಅವರನ್ನು ಸಮಿತಿಯಿಂದ ಕೂಡಲೇ ಕೈಬಿಡಬೇಕು. ಅಲ್ಲದೇ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಟಿ.ಗಂಗಾಧರ್, ಎಂ.ಗುರುಮೂರ್ತಿ, ರಮೇಶ್ ಹೆಗ್ಡೆ, ಎಚ್.ಸಿ.ಯೋಗೀಶ್, ಕೆ.ಎಲ್.ಅಶೋಕ್, ಚಂದ್ರೇಗೌಡ, ಶಾಂತಾ ಸುರೇಂದ್ರ, ಕೃಷ್ಣಮೂರ್ತಿ, ಅಂಬಿಕಾ, ರತ್ನಯ್ಯ, ಜೆ.ಎಲ್.ಪದ್ಮನಾಭ್, ಅನನ್ಯ ಶಿವಕುಮಾರ್, ಶ್ರೀಕಾಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT