ಶಿವಮೊಗ್ಗ: ತ್ರಿಪುರದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆದ ದೌರ್ಜನ್ಯ, ಪ್ರವಾದಿ ಮೊಹಮದರ ಅವಹೇಳನ ಖಂಡಿಸಿ ಸುನ್ನಿ ಜಮಾಯತ್ ವುಲ್ಉಲೇಮಾ ಕಮಿಟಿ ಸದಸ್ಯರು ಸೋಮವಾರ ಈದ್ಗಾ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.
ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆದಿರುವುದು ಖಂಡನೀಯ. ಮನುಷ್ಯನ ಸ್ವಾರ್ಥದಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಧರ್ಮಾಂಧರು ಅತಿಕ್ರಮಣ ಮಾಡುತ್ತಿದ್ದಾರೆ. ಇಂತಹ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ. ಧರ್ಮದ ಹೆಸರಲ್ಲಿ ಕೆಲವು ಕಿಡಿಗೇಡಿಗಳು ಜಾತಿಯ ವಿಷಬೀಜ ಬಿತ್ತಿ ಸಾಮರಸ್ಯ ಹಾಳುಮಾಡುತ್ತಿದ್ದಾರೆ ಎಂದು ದೂರಿದರು.
ಶಿಯಾ ಪಂಗಡಕ್ಕೆ ಸೇರಿದ ವ್ಯಕ್ತಿಯೊಬ್ಬ ಪ್ರವಾದಿ ಹಜರತ್ ಮೊಹಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವರು. ಸುನ್ನಿ ಪಂಗಡದ ಮುಸ್ಲಿಂ ಸಮುದಾಯ ನಿಂದಿಸಿರುವರು. ಪ್ರವಾದಿಗಳ ಬಗ್ಗೆ ಏನೂ ಅರಿಯದೆ ಹೀಗೆ ಮಾತನಾಡುವುದು ತಪ್ಪು. ಕುರಾನ್ ಬಗ್ಗೆ ಅನಗತ್ಯ ಮಾತು ಸರಿಯಲ್ಲ. ಅಪವಿತ್ರ ಪುಸ್ತಕ ಮುದ್ರಿಸಿ ಕೋಮು ಭಾವನೆ ಕೆರಳಿಸಿರುವುದು ಹೀನಾಯ ಕೃತ್ಯ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಅವಹೇಳನ ಮಾಡಿದ ರಿಜ್ವೆ ಮತ್ತಿತರ ಕಿಡಿಗೇಡಿಗಳನ್ನು ಬಂಧಿಸಬೇಕು. ಇಂತಹ ಕೃತ್ಯಗಳು ಮರುಕಳಿಸದಂತೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.