ಶಿವಮೊಗ್ಗ: ಬೃಹತ್ ಮೊತ್ತದ ದರ ಒಪ್ಪಂದ, ಟೆಂಡರ್ಗಳ ರದ್ದುಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಬಿ.ಎಚ್.ರಸ್ತೆಯ ಮೆಸ್ಕಾಂನ ವಿದ್ಯುತ್ ಭವನ ಎದುರು ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಗುರುವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಯಿತು.
ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಸರ್ಕಾರಿ ಯೋಜನೆಗಳ ಸಣ್ಣ ಸಣ್ಣ ವಿದ್ಯುತ್ ಕಾಮಗಾರಿಗಳ ಕಾರ್ಯಾದೇಶ ಕ್ರೋಢೀಕರಿಸಿ ಬೃಹತ್ ಮಟ್ಟದ ದರ ಒಪ್ಪಂದ ಮತ್ತು ಟೆಂಡರ್ ಕರೆದಿರುವ ಮೆಸ್ಕಾಂ ನಡೆಯನ್ನು ವಿರೋಧಿಸಲಾಯಿತು.
₹1 ಲಕ್ಷದಿಂದ ₹5 ಲಕ್ಷದವರೆಗಿನ ಕಾಮಗಾರಿಗಳನ್ನು ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ಎಸ್.ಆರ್ ದರದಲ್ಲಿ ನೇರವಾಗಿ ಪೂರ್ಣ ಅಥವಾ ಆಂಶಿಕ ಗುತ್ತಿಗೆ ನೀಡುವ ಆದೇಶವಿದ್ದರೂ, ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಟೆಂಡರ್ ಕರೆದಿರುವುದಕ್ಕೆ ವಿರೋಧ ವ್ಯಕ್ತಪಡಿಸಲಾಯಿತು.
ಜಿಲ್ಲೆಯಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರು ಈ ಕೆಲಸವನ್ನೇ ನಂಬಿಕೊಂಡಿದ್ದಾರೆ. ಅವರ ಕುಟುಂಬಗಳು ಹಾಗೂ 15 ಸಾವಿರ ಕೂಲಿ ಕಾರ್ಮಿಕರು ಈ ನಿರ್ಧಾರದಿಂದ ಬೀದಿಗೆ ಬೀಳುವ ಭೀತಿ ಎದುರಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ಗುತ್ತಿಗೆದಾರರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಎನ್.ಕುಮಾರ್, ಎನ್.ವಿಜಯ್ಕುಮಾರ್, ಶಶಿಕಾಂತ್, ಮಂಜುನಾಥ್ ಉಪಸ್ಥಿತರಿದ್ದರು.