ಭದ್ರಾವತಿ: ಇಲ್ಲಿನ ಎಚ್.ಕೆ. ಜಂಕ್ಷನ್ ಬಿಳಿಕಲ್ ಮೈನ್ಸ್ ಜಾಗದಲ್ಲಿನ ಸಂಗಮೇಶ್ವರ ಬಡಾವಣೆ ಜಾಗಕ್ಕೆ ಯಾವುದೇ ಕಾರಣಕ್ಕೂ ಹಕ್ಕುಪತ್ರ ವಿತರಣೆ ಮಾಡಬಾರದು ಎಂದು ಆಗ್ರಹಿಸಿ ಸೋಮವಾರ ಬಿಜೆಪಿಯಿಂದ ಧರಣಿ ನಡೆಸಲಾಯಿತು.
ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದ ಬಿಜೆಪಿ ಮುಖಂಡರು, ‘ಈ ಜಾಗದ ಕುರಿತಾಗಿ ಯಾವುದೇ ಸ್ಪಷ್ಟ ಆದೇಶ ಇಲ್ಲದಿದ್ದರೂ ವಿನಾಕಾರಣ ನಾಮಫಲಕ ಹಾಕಿ ಹಕ್ಕುಪತ್ರ ಕೊಡಿಸುವ ಹುನ್ನಾರ ನಡೆದಿದೆ’ ಎಂದು ದೂರಿದರು.
‘ಈ ಜಾಗದ ಸಂಬಂಧ ಅರಣ್ಯ ಮತ್ತು ಮೈನ್ಸ್ ಇಲಾಖೆ ನಡುವೆ ವಿವಾದ ಇದ್ದು, ಅದು ಬಗೆಹರಿಯುವ ಮುನ್ನವೇ ಅನಧಿಕೃತವಾಗಿ ಬೇರೆ ಕಡೆಯಿಂದ ಬಂದಿರುವ ಜನರನ್ನು ಅಲ್ಲಿ ನೆಲೆಸುವಂತೆ ಮಾಡಿ ಹಕ್ಕುಪತ್ರ ನೀಡುವ ಪ್ರಯತ್ನ ನಡೆದಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ’ ಎಂದು ಹೇಳಿದರು.
ಕೂಡಲೇ ಜಾಗದ ಸಂಬಂಧ ತಾಲ್ಲೂಕು ಆಡಳಿತ ತೆಗೆದುಕೊಂಡಿರುವ ಕ್ರಮಗಳು ಕಾನೂನಾತ್ಮಕವಾಗಿ ಇರಬೇಕು. ನಾಮ ಫಲಕದ ಕುರಿತಾಗಿ ಸ್ಪಷ್ಟ ನಿಲುವು ಪ್ರಕಟಿಸಬೇಕು. ಇಲ್ಲವಾದಲ್ಲಿ ಪಕ್ಷದ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಎಸ್. ಪ್ರಭಾಕರ, ಪ್ರಧಾನ ಕಾರ್ಯದರ್ಶಿ ಚನ್ನೇಶ್, ಹನುಮಂತನಾಯ್ಕ, ನಗರಸಭಾ ಸದಸ್ಯರಾದ ಅನುಪಮ, ಅನ್ನಪೂರ್ಣ, ಕರೀಗೌಡ, ವಿ.ಕದಿರೇಶ್, ರವಿಕುಮಾರ್, ಸೂಡಾ ಸದಸ್ಯೆ ಹೇಮಾವತಿ, ಮುಖಂಡರಾದ ಮಂಗೋಟೆ ರುದ್ರೇಶ್, ಜಿ.ಧರ್ಮಪ್ರಸಾದ್, ಗಣೇಶರಾವ್, ಚಂದ್ರು ಇದ್ದರು.
ಇಂದು ಕಾಂಗ್ರೆಸ್ ಪ್ರತಿಭಟನೆ: ಬಿಳಿಕಲ್ ಮೈನ್ಸ್ ಜಾಗದಲ್ಲಿ ಹಲವು ವರ್ಷದಿಂದ ವಾಸವಿರುವ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ತಾಲ್ಲೂಕು ಆಡಳಿತ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಕಾಂಗ್ರೆಸ್ನಿಂದ ಮನವಿ ಸಲ್ಲಿಸಲಾಗುವುದು ಎಂದು ಜಂಕ್ಷನ್ ಭಾಗದ ಮುಖಂಡ ವಿರೂಪಾಕ್ಷಪ್ಪ ತಿಳಿಸಿದ್ದಾರೆ.