ಸಾಗರ: ತಾಲ್ಲೂಕಿನ ಚಿಪ್ಪಳಿ ಲಿಂಗದಹಳ್ಳಿ ಗ್ರಾಮದ 60 ಅಡಿ ಆಳದ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಕಾಡುಕೋಣದ ಮರಿಯೊಂದನ್ನು ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ.
20 ಅಡಿಯಷ್ಟು ನೀರು ತುಂಬಿದ್ದ ಬಾವಿಗೆ ಬಿದ್ದ ಕಾಡುಕೋಣದ ಮರಿ ಜೀವನ್ಮರದ ಸ್ಥಿತಿಯಲ್ಲಿತ್ತು.
ಸಕಾಲಕ್ಕೆ ಸ್ಥಳಕ್ಕೆ ಬಂದ ಅರಣ್ಯ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಕಾಡುಕೋಣದ ಕೋಡಿಗೆ ಹಗ್ಗ ಹಾಕಿ ಮುಳುಗದಂತೆ ಎಚ್ಚರ ವಹಿಸಿದರು. ವನ್ಯಜೀವಿ ವಿಭಾಗದ ಅರಿವಳಿಕೆ ತಜ್ಞ ಡಾ.ಮುರಳಿ ಮನೋಹರ್ ಆಗಮಿಸಿ ಮರಿಗೆ ಅರಿವಳಿಕೆ ನೀಡಿದರು. ನಂತರ ಅಗ್ನಿಶಾಮಕ ಸಿಬ್ಬಂದಿಗಳು ಬಾವಿಗೆ ಇಳಿದು, ಕರುವಿನ ಹೊಟ್ಟೆಗೆ ಧೃಡವಾದ ಬೆಲ್ಟ್ ಬಿಗಿದು ಕ್ರೇನ್ ಮೂಲಕ ಕಾಡುಕೋಣದ ಮರಿಯನ್ನು ಮೇಲಕ್ಕೆತ್ತಿದರು.
ಈ ಸಂಧರ್ಭದಲ್ಲಿ ಕಲ್ಮನೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶ್ ಶೆಟ್ರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ವಲಯ ಅರಣ್ಯ ಅಧಿಕಾರಿ ಮೋಹನ್, ಉಪ ವಲಯಾರಣ್ಯಧಿಕಾರಿ ಅಶೋಕ್ ಇದ್ದರು.