ಸಾಗರ: ವಿದ್ಯಾರ್ಥಿಗಳು ಪಠ್ಯದಲ್ಲಿರುವ ಸಾಹಿತ್ಯ ಕೃತಿಯನ್ನು ರಂಗದ ಮೇಲೆ ವೀಕ್ಷಿಸುವುದರಿಂದ ವಿಭಿನ್ನ ಅನುಭವ ಪಡೆಯಲು ಸಾಧ್ಯ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಸಿ. ಸತ್ಯನಾರಾಯಣ ತಿಳಿಸಿದರು.
ಸರ್ಕಾರಿ ಪದವಿಪೂರ್ವ ಕಾಲೇಜು ವತಿಯಿಂದ ಗುರುವಾರ ಏರ್ಪಡಿಸಿದ್ದ ‘ಬೆಪ್ಪುತಕ್ಕಡಿ ಬೋಳೆ ಶಂಕರ’, ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯದಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿಗಳ ಕೃತಿಗಳನ್ನು ಸೇರಿಸಲಾಗಿದೆ. ಇವುಗಳನ್ನು ನಾಟಕ ರೂಪದಲ್ಲಿ ವಿದ್ಯಾರ್ಥಿಗಳ ಎದುರು ಪ್ರದರ್ಶಿಸಿದಾಗ ಪಠ್ಯದ ಜೊತೆಗೆ ಅದರೊಳಗಿನ ತಿರುಳನ್ನು ಅರಿಯಲು ಸಾಧ್ಯವಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ದೃಷ್ಟಿಕೋನ ಬೆಳೆಯುತ್ತದೆ ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ಜಿ.ಪರಮೇಶ್ವರಪ್ಪ ಹೇಳಿದರು.
ಪ್ರಮುಖರಾದ ಸರ್ಫ್ರಾಜ್ ಚಂದ್ರಗುತ್ತಿ, ರವೀಂದ್ರ, ಧರ್ಮಪ್ಪ, ದೇವೇಂದ್ರಪ್ಪ, ಪ್ರಭಾವತಿ, ಶರಣ ಶೆಟ್ಟರ್, ಎಲ್.ಎಂ.ಹೆಗಡೆ, ಲಕ್ಷ್ಮಣ ಪಿರಗಾರ ಇದ್ದರು.
ಕೊಪ್ಪಳದ ರಂಗಧಾರ ರೆಪರ್ಟರಿ ಮತ್ತು ಕಲ್ಪುರ ಸಾಂಸ್ಕೃತಿಕ ಕಲಾ ಸಂಘದವರು ಚಂದ್ರಶೇಖರ ಕಂಬಾರರ ‘ಬೆಪ್ಪುತಕ್ಕಡಿ ಬೋಳೆ ಶಂಕರ’, ಪೂರ್ಣಚಂದ್ರ ತೇಜಸ್ವಿ ಅವರ ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.